ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ವಿಪರೀತ ಗಾಳಿ ಮತ್ತು ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಇಡೀ ರಾಜ್ಯದಲ್ಲಿ ಈಗ ಮಳೆ ಅಬ್ಬರಿಸುತ್ತಿದೆ.
ಬೆಂಗಳೂರಿನಲ್ಲಿ ಮೊನ್ನೆಯಿಂದ ಮೋಡ ಕವಿದ ವಾತಾವರಣವಿದ್ದರೂ ಸಣ್ಣ ಮಳೆಯಾಗಿತ್ತಷ್ಟೇ. ಆದರೆ ಇಂದು ಮಧ್ಯಾಹ್ನದ ಬಳಿಕ ದಟ್ಟ ಮೋಡ ಕವಿದ ವಾತಾವರಣದ ಜೊತೆಗೆ ವಿಪರೀತ ಗಾಳಿ ಕಂಡುಬರುತ್ತಿದೆ. ರಾತ್ರಿ ವೇಳೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ ವೀಕೆಂಡ್ ನಲ್ಲಿ ಹೊರಗಡೆ ಪ್ಲ್ಯಾನ್ ಮಾಡಿಕೊಂಡಿದ್ದರೆ ಕೊಂಚ ಯೋಚಿಸಿ ಹೊರಗಡೆ ಕಾಲಿಡುವುದು ಒಳಿತು.
ಇನ್ನು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಂತೂ ವಿಪರೀತ ಮಳೆಯಾಗುತ್ತಿದೆ. ಮಂಗಳೂರಿನಲ್ಲಿ ಪ್ರಮುಖ ಭಾಗಗಳು ಜಲಾವೃತವಾಗಿದ್ದು, ಪ್ರವಾಹ ಪೀಡಿತರಿಗಾಗಿ ಕದ್ರಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಕರಾವಳಿಯಲ್ಲಿ ಕುಂಭದ್ರೋಣ ಮಳೆಗೆ ಜನ ಹೈರಾಣಾಗಿದ್ದಾರೆ. ಇದಲ್ಲದೆ ಮೈಸೂರು, ಮಂಡ್ಯ, ಶಿವಮೊಗ್ಗ, ಕೊಡಗು, ಹಾವೇರಿ, ರಾಯಚೂರು, ಕೋಲಾರ, ತುಮಕೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆಯ ವಾತಾವರಣವಿದೆ.