ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಚಳಿ ಕಂಡುಬರುತ್ತಿದೆ. ಆದರೆ ಚಳಿಗೆ ಗಡ ಗಡ ನಡುಗುತ್ತಿದ್ದ ಜನರಿಗೆ ಇಂದಿನ ಹವಾಮಾನ ವರದಿ ಕೊಂಚ ಸಮಾಧಾನಕರವಾಗಿದೆ.
ಇಂದು ಕನಿಷ್ಠ ತಾಪಮಾನದಲ್ಲಿ ಕೊಂಚ ಏರಿಕೆಯಾಗಲಿದ್ದು, ಚಳಿ ತಕ್ಕಮಟ್ಟಿಗೆ ಕಡಿಮೆಯಾಗಲಿದೆ. ಇಂದು ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 18 ಡಿಗ್ರಿಯಷ್ಟಿರಲಿದೆ ಎಂದು ನಿರೀಕ್ಷಿಸಲಾಗಿದೆ. ಗರಿಷ್ಠ ತಾಪಮಾನ 27 ಡಿಗ್ರಿಯಷ್ಟಿರಲಿದೆ.
ಒಟ್ಟಾರೆಯಾಗಿ ಇಂದು ವಾತಾವರಣ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಹಾಗಿದ್ದರೂ ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್ ಜಿಲ್ಲೆಗಳಲ್ಲಿ ತಾಪಮಾನ 13-16 ಡಿಗ್ರಿಯೊಳಗಿರಲಿದ್ದು ವಿಪರೀತ ಚಳಿ ಕಂಡುಬರಲಿದೆ.
ವಿಶೇಷವೆಂದರೆ ಹಾಸನ, ಕೋಲಾರ ಜಿಲ್ಲೆಗಳಲ್ಲಿ ದಟ್ಟ ಮೋಡ ಕವಿದ ವಾತಾವರಣವಿರಲಿದೆ. ದಕ್ಷಿಣ ಕನ್ನಡದಲ್ಲಿ ಕನಿಷ್ಠ ತಾಪಮಾನ 21 ಡಿಗ್ರಿಯಷ್ಟಿರಲಿದೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 16-18 ಡಿಗ್ರಿಯಷ್ಟಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.