Publish Date: Tue, 03 Mar 2026 (09:17 IST)
Updated Date: Tue, 03 Mar 2026 (09:29 IST)
ಬೆಂಗಳೂರು: ಇಸ್ರೇಲ್ ಇರಾನ್ ನಡುವಿನ ಸಂಘರ್ಷದಿಂದಾಗಿ ಅಬುದಾಬಿಯಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರು ಸೇಫ್ ಆಗಿ ತಾಯ್ನಾಡಿಗೆ ಬಂದಿಳಿದಿದ್ದಾರೆ.
ಇರಾನ್ ಗಲ್ಫ್ ರಾಷ್ಟ್ರಗಳನ್ನೂ ಟಾರ್ಗೆಟ್ ಮಾಡಿಕೊಂಡಿದೆ. ಹಲವು ಕಡೆ ದಾಳಿ ನಡೆಸಿದೆ. ಹೀಗಾಗಿ ಗಲ್ಫ್ ರಾಷ್ಟ್ರಗಳಿಂದ ವಿವಿಧ ಕಡೆಗೆ ಹೋಗಲಿದ್ದ ಅನೇಕ ವಿಮಾನಗಳು ರದ್ದಾಗಿದ್ದವು. ಹೀಗಾಗಿ ಸಾಕಷ್ಟು ಪ್ರಯಾಣಿಕರು ಗಮ್ಯ ಸ್ಥಳಕ್ಕೆ ತಲುಪಲಾಗದೇ ಅತಂತ್ರರಾಗಿದ್ದರು.
ಇದೀಗ ಅಬುದಾಬಿಯಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರು ಎರಡು ವಿಮಾನಗಳಲ್ಲಿ ತಾಯ್ನಾಡಿಗೆ ಬಂದಿಳಿದಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಕನ್ನಡಿಗರು ಎರಡು ವಿಮಾನಗಳಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ನಿನ್ನೆ ರಾತ್ರಿ 10 ಗಂಟೆಗೆ ಒಂದು ವಿಮಾನ ಮತ್ತು ಇಂದು ಬೆಳಿಗ್ಗಿನ ಜಾವ 3.20 ಕ್ಕೆ ಇನ್ನೊಂದು ವಿಮಾನದಲ್ಲಿ ಪ್ರಯಾಣಿಕರು ಬಂದಿದ್ದಾರೆ. ಇನ್ನು ದುಬೈನಲ್ಲಿ ಸಿಲುಕಿಕೊಂಡಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೂಡಾ ಸೇಫ್ ಆಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.