Publish Date: Mon, 29 Dec 2025 (10:23 IST)
Updated Date: Mon, 29 Dec 2025 (10:26 IST)
ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲಿಮರ ವಸತಿಗಳನ್ನು ನೆಲಸಮ ಮಾಡಿರುವ ವಿಚಾರವಾಗಿ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕರ್ನಾಟಕ ಸರ್ಕಾರಕ್ಕೆ ಪುನರ್ವಸತಿ ಕೈಗೊಳ್ಳುವಂತೆ ಆದೇಶಿಸಿರುವುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು ಸರ್ಕಾರಕ್ಕೆ ಆದೇಶಿಸಲು ಕೆಸಿ ವೇಣುಗೋಪಾಲ್ ಯಾರು ಎಂದು ಪ್ರಶ್ನಿಸಿದ್ದಾರೆ.
ಕೋಗಿಲು ಲೇಔಟ್ ನಲ್ಲಿ ಸರ್ಕಾರೀ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮುಸ್ಲಿಮರ ವಸತಿಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿತ್ತು. ಈ ವಿಚಾರವನ್ನು ಕೆದಕಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಷ್ಟೇ ಅಲ್ಲ, ಕೋಗಿಲು ಲೇಔಟ್ ಗೆ ಕೇರಳದ ಶಾಸಕರು, ಸಂಸದರು ಬಂದು ಮೂಗು ತೂರಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು ಕರ್ನಾಟಕ ಸಿಎಂ, ಡಿಸಿಎಂ ಬಳಿ ಮಾತನಾಡಿದ್ದೇನೆ. ಮನೆ ಕಳೆದುಕೊಂಡವರಿಗೆ ಮಾನವೀಯತೆಯ ದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಮಾಡಿಕೊಡಿ ಎಂದು ಹೇಳಿದ್ದೇನೆ ಎಂದಿದ್ದರು.
ಅವರ ಈ ಟ್ವೀಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅಷ್ಟಕ್ಕೂ ಕರ್ನಾಟಕ ಸರ್ಕಾರ ಎನ್ನುವುದು ಜನರಿಂದ ಚುನಾಯಿತವಾದ ಸರ್ಕಾರ. ಇದು ಕನ್ನಡಿಗರ ಸರ್ಕಾರ. ಇದಕ್ಕೆ ಆರ್ಡರ್ ಕೊಡಲು ಕೆಸಿ ವೇಣುಗೋಪಾಲ್ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದರೆ ಕಾಂಗ್ರೆಸ್ ಅಕ್ರಮ ಕಟ್ಟಡ, ಅಕ್ರಮ ಸ್ಥಳ ಒತ್ತುವರಿಗೆ ಸಪೋರ್ಟ್ ಮಾಡಿದಂತಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈಗ ಎಲ್ಲಿ ಹೋಯ್ತು ನಿಮ್ಮ ಕನ್ನಡ ಪರಾಕ್ರಮ? ಯಾಕೆ ಕೇರಳ ಹೇಳಿದ್ದಕ್ಕೆ ಕರ್ನಾಟಕ ಸರ್ಕಾರ ಮಣಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.