Publish Date: Fri, 20 Jul 2018 (15:23 IST)
Updated Date: Fri, 20 Jul 2018 (15:26 IST)
ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 70 ಸಾವಿರಕ್ಕೂ ಹೆಚ್ಚು ಕೂಸೆಕ್ ನೀರನ್ನು 20 ಗೇಟ್ಗಳ ಮೂಲಕ ನದಿಗೆ ಬಿಡಲಾಗಿದೆ. ಇದರಿಂದ ಕಂಪ್ಲಿ ಪಟ್ಟಣದ ಬಳಿಯ ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಗೆ ಕೆಲವು ಅಡಿಯಷ್ಟೇ ಬಾಕಿಯಿದೆ.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ ಕೋಟೆಯ ತುಂಗಾಭದ್ರ ನದಿಯಲ್ಲಿ ಉಕ್ಕಿ ಬರುತ್ತಿರುವ ನೀರನ್ನು ಕಣ್ತುಂಬಿಕೊಳ್ಳಲು ತಂಡ ತಂಡವಾಗಿ ನದಿಯತ್ತ ಜನ ದಾಪುಗಾಲಿಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಈ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಆದರೆ, ನಂತರ ಭರ್ತಿಯಾಗದೇ ಇದ್ದರಿಂದ ಈ ಸೇತುವೆ ಮುಳುಗಡೆ ಭೀತಿಯನ್ನು ಜನ ಕಂಡಿರಲಿಲ್ಲ. ಆದರೆ ಈ ವರ್ಷ ಸೇತುವೆ ಮುಳುಗಡೆ ಭೀತಿ ಎದುರಾಗಿದೆ.
ಕಂಪ್ಲಿ-ಕೋಟೆಯ ಹೊರವಲಯದ ಬಾಳೆ ತೋಟಗಳಿಗೆ ನೀರು ನುಗ್ಗಿದೆ. ಹೊಳೆ ಆಂಜನೇಯ ದೇವಸ್ಥಾನ ಜಲಾವೃತವಾಗುವ ಸಾಧ್ಯತೆಯಿದೆ. ಒಂದು ಕಡೆ ರೈತರಿಗೆ ಹರ್ಷವಾದರೆ, ಮತ್ತೊಂದು ಕಡೆ ನದಿ ಪಾತ್ರದ ಜನರಿಗೆ ಸಂಕಷ್ಟ ಎದುರಾದಂತಾಗಿದೆ. ನದಿಗೆ ನೀರು ಬಿಟ್ಟಿರುವುದನ್ನು ನೋಡಲು ಕಂಪ್ಲಿ, ರಾಮಸಾಗರ, ಕೊಟ್ಟಾಲ್ ಸುತ್ತಮುತ್ತಲ ಪ್ರದೇಶದ ಜನ ಆಗಮಿಸುತ್ತಿದ್ದಾರೆ. ಸೇತುವೆಯ ತಳಭಾಗದಲ್ಲಿ ನೀರು ಹರಿಯುತ್ತಿದೆ. ಇನ್ನೇನು ಸೇತುವೆ ಮೇಲೆ ನೀರು ಹರಿಯಲು ಕೆಲವು ಅಡಿ ಬಾಕಿಯಿದೆ. ಆದಗ್ಯೂ ಸಹ ಭಾರೀ ಗಾತ್ರದ ವಾಹನಗಳ ಸಂಚಾರ ನಿಂತಿಲ್ಲ.
ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದರಿಂದ ನದಿಯಲ್ಲಿ ನೀರು ಉಕ್ಕಿ ಹರಿದು ಬರುತ್ತಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನೀರಿನಿಂದ ಸಾರ್ವಜನಿಕರು ದೂರ ಉಳಿಯಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.