Publish Date: Fri, 20 Jul 2018 (15:14 IST)
Updated Date: Fri, 20 Jul 2018 (15:18 IST)
ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮುಂಗಾರು ಹಂಗಾಮಿಗೆ ಆಲಮಟ್ಟಿ ಎಡದಂಡೆ ಕಾಲುವೆಗೆ ಇಂದಿನಿಂದ ನೀರು ಹರಿಯಲು ಆರಂಭಗೊಳ್ಳಲಿದೆ. ಇತ್ತೀಚಿಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ಕಾಲುವೆಗಳಿಗೆ 17 ರ ಮಧ್ಯರಾತ್ರಿಯಿಂದ ನೀರು ಹರಿಯಬೇಕಿತ್ತು. ಆದರೆ ಆಲಮಟ್ಟಿ ಎಡದಂಡೆ ಕಾಲುವೆಯ ಆಧುನೀಕರಣ ಕಾರ್ಯ ನಡೆದಿದ್ದರಿಂದ, ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಎರಡು ದಿನ ಕಾಲಾವಕಾಶ ಅಗತ್ಯವಿತ್ತು. ಸದ್ಯ ಕಾಲುವೆಯ ಆಧುನೀಕರಣ ಕಾರ್ಯ ಸ್ಥಗಿತಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಅವಕಾಶ ಕಲ್ಪಿಸುವ ಕಾರ್ಯ ಮುಗಿದಿದೆ. ಇಂದಿನಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ.
ಆಲಮಟ್ಟಿ ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದು ಎ.ಎಲ್.ಬಿ.ಸಿ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಂ. ಛಬ್ಬಿ ಹೇಳಿಕೆ ನೀಡಿದ್ದಾರೆ. ಆಲಮಟ್ಟಿ ಎಡದಂಡೆ ಕಾಲುವೆಯಿಂದ 22 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಆಗುತ್ತದೆ. ಈ ಭಾಗದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಬಿದ್ದ ಕಾರಣ, ಇನ್ನೂ ಮುಂಗಾರು ಹಂಗಾಮಿನ ಬಿತ್ತನೆಯೂ ನಡೆದಿಲ್ಲ, ಹೀಗಾಗಿ ಕಾಲುವೆಗೆ ನೀರು ಬೇಕು ಎಂಬ ರೈತರ ಒತ್ತಾಸೆಯಾಗಿತ್ತು.
ಆಧುನೀಕರಣ ಕಾರ್ಯ ಅರ್ಧಕ್ಕೆ ನಿಲ್ಲಿಸಿ ಕಾಲುವೆಗೆ ನೀರು ಹರಿಯಲು ಕ್ರಮ ಕೈಗೊಳ್ಳಲಾಗಿದೆ. ಎಎಲ್ಬಿಸಿ ಕಾಲುವೆಗಳ ಮೊದಲ 12 ಕಿ.ಮೀ ಕಾಲುವೆ ದೊಡ್ಡದಾಗಿದ್ದು, 50 ಕ್ಯುಸೆಕ್ಸ್ ನೀರು ಹರಿಯುವ ಸಾಮರ್ಥ್ಯ ಹೊಂದಿದೆ. ನಂತರ ಕಾಲುವೆಯ ಗಾತ್ರ ಚಿಕ್ಕದಾಗಿದ್ದು 20 ಕ್ಯೂಸೆಕ್ಸ್ ನೀರು ಹರಿಯಲಿದೆ.