Publish Date: Sat, 27 Apr 2024 (09:13 IST)
Updated Date: Sat, 27 Apr 2024 (09:21 IST)
ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 4.8 ಕೋಟಿ ರೂ. ಮೌಲ್ಯದ ಹಣ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸುಧಾಕರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಸುಧಾಕರ್ ಆಪ್ತ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ಅವರ ನೆಲಮಂಗಲದ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ದಾಖಲೆಯಿಲ್ಲದ 4 ಕೋಟಿ, 80 ಲಕ್ಷ ರೂ. ಹಣ ಸಿಕ್ಕಿತ್ತು. ಅಧಿಕಾರಿಗಳು ಹಣ ವಶಪಡಿಸಿಕೊಂಡ ಬಳಿಕ ಬೆಂಗಳೂರು ಉತ್ತರ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಕರೆ ಮಾಡಿ ಹಣ ಮರಳಿಸಲು ಸಹಾಯ ಮಾಡುವಂತೆ ಸುಧಾಕರ್ ಕೇಳಿಕೊಂಡಿದ್ದಾರೆ.
ಈ ವಿಚಾರವನ್ನು ಮುನೀಶ್ ಸಾಕ್ಷಿ ಸಮೇತ ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ. ಈ ಸಂಬಂಧ ಎಸ್ಎಸ್ ಟಿ ತಂಡದ ಮುಖ್ಯಸ್ಥ ದಶರಥ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ, ಲಂಚಕ್ಕೆ ಅಮಿಷವೊಡ್ಡಿದ ಪ್ರಕರಣದಡಿಯಲ್ಲಿ ಸುಧಾಕರ್ ವಿರುದ್ಧ ದೂರು ದಾಖಲಾಗಿದೆ.
ಚುನಾವಣೆ ಸಮಯದಲ್ಲಿ ಮತದಾರರಿಗೆ ಹಂಚಲು ಆಪ್ತನ ಮನೆಯಲ್ಲಿ ಸುಧಾಕರ್ ಹಣವಿಟ್ಟಿದ್ದರು ಎನ್ನಲಾಗಿದೆ. ಆದರೆ ಇದರ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಪ್ರಕರಣ ಸುಧಾಕರ್ ರನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.