Publish Date: Fri, 26 Apr 2024 (16:21 IST)
Updated Date: Fri, 26 Apr 2024 (16:23 IST)
ಬೆಂಗಳೂರು: ಕರ್ನಾಟಕದಲ್ಲಿ ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಮತಚಲಾಯಿಸಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಸಹೋದರ ಡಿಕೆ ಸುರೇಶ್ ಸಾತನೂರಿನಲ್ಲಿ ಜೊತೆಯಾಗಿ ಹೋಗಿ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಕೂಡಾ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳ ಮುಂದೆ ಅವರು ಮಾತನಾಡಿದ್ದಾರೆ.
ಡಿಕೆಶಿ ಪುತ್ರಿ ಐಶ್ವರ್ಯಾ ಎಸ್ ಎಂ ಕೃಷ್ಣ ಮೊಮ್ಮಗನ ಪತ್ನಿಯೂ ಹೌದು. ಹೀಗಾಗಿ ಅವರ ಕುಟುಂಬವಿಡೀ ರಾಜಕೀಯ ಹಿನ್ನಲೆ ಹೊಂದಿದೆ. ರಾಜಕೀಯ ಹಿನ್ನಲೆಯುಳ್ಳ ಕುಟುಂಬದಿಂದ ಬಂದವರಾಗಿರುವುದರಿಂದ ಅವರೂ ಮುಂದೊಂದು ದಿನ ರಾಜಕೀಯ ಸೇರ್ಪಡೆಯಾಗಬಹುದೇ ಎಂದು ಮಾಧ್ಯಮಗಳು ಪ್ರಶ್ನಿಸಿವೆ.
ಈ ವೇಳೆ ಪ್ರತಿಕ್ರಿಯಿಸಿದ ಐಶ್ವರ್ಯಾ ನನಗೆ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ನಾನು ಎಜುಕೇಷನಲಿಸ್ಟ್. ನನ್ನ ವೃತ್ತಿಯಲ್ಲೇ ನನಗೆ ಸಂತೋಷ, ತೃಪ್ತಿಯಿದೆ. ಎಲ್ಲರೂ ದೇಶ ಹೆಮ್ಮೆಪಡುವಂತೆ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ನಾನು ಈಗ ದೇಶಕ್ಕೆ ಅಗತ್ಯವಿರುವ ಒಂದು ವೃತ್ತಿಯಲ್ಲಿ ಮುಂದುವರಿಯುತ್ತಿದ್ದೇನೆ ಎಂದಿದ್ದಾರೆ.