Publish Date: Sat, 06 May 2023 (12:11 IST)
Updated Date: Sat, 06 May 2023 (11:43 IST)
ಮೈಸೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾನೇ ಬಜರಂಗದಳವನ್ನು ಬ್ಯಾನ್ ಮಾಡೋದು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಜರಂಗದಳವನ್ನು ಬ್ಯಾನ್ ಮಾಡಲು ಅವರಿಗೆ ಅವಕಾಶ ಕೊಡುವವರು ಯಾರು? ಬಜರಂಗದಳವು ದೇಶಭಕ್ತಿಯ ಸಂಘಟನೆ. ಹಿಂದೂ ಪರ ಕಾಳಜಿ ಇರುವ ಸಂಘಟನೆ. ಒಂದು ಸಂಘಟನೆ ಬಗ್ಗೆ ಕಾಂಗ್ರೆಸ್ ಮನಬಂದಂತೆ ಮಾತನಾಡಿದರೆ ರಾಜ್ಯದ ಜನರು ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ಚುನಾವಣೆಯಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವುದರಿಂದ ಬ್ಯಾನ್ ಮಾಡುವ ವಿಚಾರ ಉದ್ಭವ ಆಗಲ್ಲ. ಕಾಂಗ್ರೆಸ್ ಪಕ್ಷದಿಂದ ಯಾವ ನಿರೀಕ್ಷೆ ಮಾಡಲು ಆಗುತ್ತದೆ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವಾಗ ಎಷ್ಟು ಹಿಂದೂ ಯುವಕರ ಹತ್ಯೆ ಆಯಿತು. ಅವರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಇರುವುದರಿಂದ ರಾಜ್ಯದ ಜನರು ಅವಕಾಶ ಮಾಡಿಕೊಡುವುದಿಲ್ಲ ಎಂದರು.
ವರುಣಾದಲ್ಲಿ ಸಿದ್ದರಾಮಯ್ಯ ಪರವಾಗಿ ಸ್ಯಾಂಡಲ್ವುಡ್ ನಟ-ನಟಿಯರ ಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ವರುಣಾ ಕ್ಷೇತ್ರದಲ್ಲಿ ಸ್ಟಾರ್ಗಳು ಬಂದು ಮತ ಹಾಕುವುದಿಲ್ಲ. ಅಲ್ಲಿ ಮತದಾನ ಮಾಡುವುದು ಜನಗಳು. ಈ ಬಾರಿ ಅಲ್ಲಿನ ಜನಗಳು ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.