Publish Date: Thu, 09 Nov 2023 (09:30 IST)
Updated Date: Thu, 09 Nov 2023 (09:34 IST)
ಚಾಮರಾಜನಗರ: ಪತ್ನಿಗೆ ಅನೈತಿಕ ಸಂಬಂಧವಿದೆಯೆಂಬ ಅನುಮಾನದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಪತಿ ಆಕೆಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ವೃತ್ತಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿರುವ ಪತಿ ಕಿಶೋರ್ ಹೊಸಕೋಟೆಯಲ್ಲಿರುವ ಪತ್ನಿಯ ತವರು ಮನೆಗೆ ತೆರಳಿ ಈ ಕೃತ್ಯವೆಸಗಿದ್ದಾನೆ. ದಾರಿ ಮಧ್ಯೆ ಪತ್ನಿಗೆ ಸುಮಾರು 150 ಬಾರಿ ಕರೆ ಮಾಡಿದ್ದಾನೆ. ಆದರೆ ಪತ್ನಿ ಇದಕ್ಕೆ ಉತ್ತರಿಸಿರಲಿಲ್ಲ.
ವಿಪರ್ಯಾಸವೆಂದರೆ ಹೆಂಡತಿಗೆ 11 ದಿನಗಳ ಹಿಂದಷ್ಟೇ ಹೆರಿಗೆಯಾಗಿತ್ತು. ದಂಪತಿಗೆ ನವಜಾತ ಗಂಡುಮಗುವಾಗಿತ್ತು. ಪತ್ನಿಯ ತವರು ಮನೆಗೆ ಬಂದ ಕಿಶೋರ್ ಮೊದಲು ತಾನು ವಿಷ ಸೇವಿಸಿ ಬಳಿಕ ಆಕೆಯ ಕೋಣೆ ಬಾಗಿಲು ಭದ್ರಪಡಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅನುಮಾನಗೊಂಡ ಅತ್ತೆ ಬಾಗಿಲು ಬಡಿದಾಗ ಉತ್ತರ ಬಂದಿರಲಿಲ್ಲ. ಕೆಲವು ನಿಮಿಷಗಳ ಬಳಿಕ ಕಿಶೋರ್ ನಾನು ಪತ್ನಿಯನ್ನು ಕೊಂದು ಬಿಟ್ಟೆ ಎನ್ನುತ್ತಾ ಹೊರಗೆ ಓಡಿ ಬಂದಿದ್ದ. ಇದೀಗ ಆರೋಪಿ ಕಿಶೋರ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ಗುಣವಾದ ಬಳಿಕ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.