ಬೆಂಗಳೂರು: ನಮ್ಮ ಬಳಿ ದುಡ್ಡಿಲ್ಲ ಕೇಂದ್ರ ಸರ್ಕಾರವನ್ನೇ ಕೇಳಬೇಕು ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೇ ವಿಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಪರಮೇಶ್ವರ್ ಬಾದಾಮಿಯಲ್ಲಿ ಮಾತನಾಡುವಾಗ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಬಳಿ ಹಣವಿಲ್ಲ. ಕೇಂದ್ರವನ್ನೇ ಕೇಳಬೇಕು ಎಂದು ಹೇಳಿದ್ದ ವಿಡಿಯೋವನ್ನು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಜೊತೆಗೆ ರಾಜ್ಯದ ಬೊಕ್ಕಸ ಖಾಲಿ ಮಾಡಿಕೊಂಡಿರುವ ಸಿದ್ದರಾಮಯ್ಯ ಸರ್ಕಾರ ಸಚಿವರ ಕೈಯಲ್ಲಿ ಹಣವಿಲ್ಲ ಎಂದು ಹೇಳಿಸಿದೆ ಎಂದು ವ್ಯಂಗ್ಯ ಮಾಡಿತ್ತು.
ಇದರ ಬೆನ್ನಲ್ಲೇ ಗೃಹಸಚಿವರು ಸ್ಪಷ್ಟನೆ ನೀಡಿದ್ದು ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಮಾಧ್ಯಮಗಳು ನನ್ನ ಬಳಿ ತಮಾಷೆಯಾಗಿ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೇ ನಾನೂ ತಮಾಷೆಯ ಧಾಟಿಯಲ್ಲೇ ನಮ್ಮ ಬಳಿ ಹಣವಿಲ್ಲ ಎಂದಿದ್ದೆ ಅಷ್ಟೇ. ಆದರೆ ಅಭಿವೃದ್ಧಿ ಯೋಜನೆಗಳಿಗೆ ಬೇಕಾಗುವಷ್ಟು ಹಣ ನಮ್ಮಲ್ಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ಅದೇನೇ ಇದ್ದರೂ ಈಗ ಸರ್ಕಾರದ ಬೊಕ್ಕಸ ಗ್ಯಾರಂಟಿಗಳಿಂದಾಗಿ ಖಾಲಿಯಾಗಿದೆ ಎಂದು ಟೀಕಿಸುತ್ತಲೇ ಬಂದಿರುವ ಬಿಜೆಪಿಗೆ ಈ ಮಾತುಗಳು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಸಿಲುಕುವಂತಾಗಿದೆ.