Publish Date: Tue, 19 Mar 2024 (10:43 IST)
Updated Date: Tue, 19 Mar 2024 (10:54 IST)
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿಯೇ ಕಣಕ್ಕಿಳಿಯಲು ಕೊನೆಯ ಕ್ಷಣದಲ್ಲಿ ತೀರ್ಮಾನಿಸಿದ್ದಾರೆ.
ಒಂದೆಡೆ ಸುಮಲತಾ ಬಿಜೆಪಿಯಿಂದ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಇತ್ತ ಕುಮಾರಸ್ವಾಮಿ ಮಂಡ್ಯ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಲು ಬಿಜೆಪಿ ಬೆಂಬಲ ನೀಡದೇ ಇದ್ದರೆ ರಾಜ್ಯದಲ್ಲಿ ಮಾಡಿಕೊಂಡಿರುವ ಮೈತ್ರಿಗೆ ಪೆಟ್ಟು ಬೀಳಲಿದೆ.
ನಿನ್ನೆಯಷ್ಟೇ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ನಮಗೆ ಬೇಕಾದ ಮೂರು ಕ್ಷೇತ್ರಕ್ಕೆ ಇಷ್ಟೆಲ್ಲಾ ಲಾಬಿ ಮಾಡಬೇಕಾ ಎಂದು ಕಿಡಿ ಕಾರಿದ್ದರು. ಕೋಲಾರ ಟಿಕೆಟ್ ವಿಚಾರವಾಗಿ ಅವರು ಈ ರೀತಿ ಅಸಮಾಧಾನ ತೋಡಿಕೊಂಡಿದ್ದರು. ಇದೀಗ ಮಂಡ್ಯವೂ ಸುಮಲತಾಗೆ ಬಿಟ್ಟುಕೊಟ್ಟರೆ ಜೆಡಿಎಸ್ ಕೆರಳಿ ಕೆಂಡವಾಗಲಿದೆ.
ಈಗಿನ ಮಾಹಿತಿ ಪ್ರಕಾರ ಕುಮಾರಸ್ವಾಮಿಯೇ ಮಂಡ್ಯದಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿಗೆ ಅಭಿಮಾನಿ ಬಳಗವೇ ಇದೆ. ಕುಮಾರಸ್ವಾಮಿ ಸ್ಪರ್ಧಿಸಿದರೆ ಕಾಂಗ್ರೆಸ್ ಗೆ ಹೊಡೆತ ಬೀಳುವುದು ಗ್ಯಾರಂಟಿ. ಹೀಗಾಗಿ ಅವರೇ ಕಣಕ್ಕಿಳಿಯಲು ಹೊರಟಿದ್ದಾರೆ ಎನ್ನಲಾಗಿದೆ.