Publish Date: Mon, 18 Mar 2024 (17:40 IST)
Updated Date: Mon, 18 Mar 2024 (17:42 IST)
ಮಂಡ್ಯ: ಬಿಜೆಪಿ ಹೈಕಮಾಂಡ್ ಭೇಟಿ ಬಳಿಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಂಡ್ಯ ಟಿಕೆಟ್ ಇನ್ನೂ ಯಾರಿಗೆ ಎಂದು ತೀರ್ಮಾನವಾಗಿಲ್ಲ ಎಂದಿದ್ದಾರೆ.
ಒಂದೆಡೆ ಮಂಡ್ಯ ಟಿಕೆಟ್ ಗಾಗಿ ಜೆಡಿಎಸ್ ಪೈಪೋಟಿ ನಡೆಸಿದೆ. ಜೆಡಿಎಸ್ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕೆಲಸವನ್ನೂ ಶುರು ಮಾಡಿದೆ. ಆದರೆ ಈ ನಡುವೆ ಸುಮಲತಾ ಮಾತ್ರ ಮಂಡ್ಯದಿಂದ ಬಿಜೆಪಿ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಮಂಡ್ಯ ಟಿಕೆಟ್ ಜೆಡಿಎಸ್ ಗೇ ಎಂದು ಬಿಜೆಪಿಯಂದಲೇ ಸೂಚನೆ ಬಂದಿತ್ತು.
ಆದರೆ ಸುಮಲತಾ ಈ ಬಗ್ಗೆ ಅಸಮಾಧಾನಗೊಂಡಿದ್ದು, ಅವರಿಗೆ ದೆಹಲಿಗೆ ಬಂದು ಮಾತುಕತೆ ನಡೆಸುವಂತೆ ಬುಲಾವ್ ನೀಡಲಾಗಿತ್ತು. ಅದರಂತೆ ಇಂದು ಸುಮಲತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಅವರು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ.
ಮಂಡ್ಯ ಟಿಕೆಟ್ ಬಗ್ಗೆ ಇನ್ನೂ ಏನೂ ತೀರ್ಮಾನವಾಗಿಲ್ಲ. ಅದನ್ನು ನನಗೇ ನೀಡುವಂತೆ ಕೇಳಿದ್ದೇನೆ. ಈವತ್ತು ಸಂಜೆ ಸಭೆಯ ನಂತರ ನಿರ್ಧಾರವಾಗಲಿದೆ. ಮೋದಿಯವರೂ ನನಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರವಾಗಲ್ಲ. ನನ್ನ ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.