Publish Date: Mon, 18 Mar 2024 (14:01 IST)
Updated Date: Mon, 18 Mar 2024 (14:03 IST)
ಬೆಂಗಳೂರು: ಮೈಸೂರಿನಲ್ಲಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವ ರಾಜವಂಶಸ್ಥ ಯದುವೀರ್ ಒಡೆಯರ್ ಜನರ ನಡುವೆಯೇ ಇದ್ದು ಕೆಲಸ ಮಾಡುವುದಾಗಿ ಹೇಳಿದ್ದಾರೆ.
ರಾಜಮನೆತನದವರು ಎಸಿ ರೂಂ ಬಿಟ್ಟು ಜನರ ನಡುವೆ ಕೆಲಸ ಮಾಡಲಿ ಎಂದು ಟೀಕೆಗಳು ಬಂದ ಬೆನ್ನಲ್ಲೇ ಯದುವೀರ್ ಒಡೆಯರ್ ಈ ಹೇಳಿಕೆ ನೀಡಿದ್ದಾರೆ. ನನ್ನನ್ನು ಸಂಪರ್ಕಿಸಲು ನೀವು ಅರಮನೆಗೆ ಬರಬೇಕಾಗಿಲ್ಲ. ನಾನೇ ನಿಮ್ಮ ಬಳಿಗೆ ಬರುತ್ತೇನೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ನನಗೆ ಎಲ್ಲ ಪಕ್ಷದವರೊಂದಿಗೆ ಸಂಪರ್ಕವಿದೆ. ನನ್ನ ಪರಿಕಲ್ಪನೆ ಬಿಜೆಪಿಯೊಂದಿಗೆ ಹೊಂದಾಣಿಕೆಯಾಗುತ್ತದೆ. ಅದೇ ಕಾರಣಕ್ಕೆ ನಾನು ಬಿಜೆಪಿಯೊಂದಿಗೆ ಕೈ ಜೋಡಿಸುತ್ತಿದ್ದೇನೆ. ಜನರಿಗೂ ಅರಮನೆ ಜೊತೆ ವಿಶೇಷ ನಂಟಿದೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ನನ್ನ ತಾಯಿ ಪ್ರಮೋದಾ ದೇವಿ ಒಡೆಯರ್ ಆಶೀರ್ವಾದ ನನ್ನ ಮೇಲಿದೆ. ಅವರ ಸಹಕಾರ ನನ್ನ ಜೊತೆಗಿರುತ್ತದೆ. ನನ್ನ ಪರವಾಗಿ ತಾಯಿ ಪ್ರಚಾರಕ್ಕೆ ಬರುವ ಅಗತ್ಯವಿಲ್ಲ ಎಂದಿದ್ದಾರೆ. ಯದುವೀರ್ ಈಗಾಗಲೇ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ಕೆಲಸ ಮಾಡುತ್ತಿದ್ದಾರೆ.