Publish Date: Sat, 12 Jul 2025 (14:07 IST)
Updated Date: Sat, 12 Jul 2025 (14:09 IST)
ಮಂಗಳೂರು: ಸುರತ್ಕಲ್ ಸಮೀಪದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ ಲಿಮಿಟೆಡ್ (ಎಂಆರ್ಪಿಎಲ್)ನ ಎಚ್2ಎಸ್ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದೆ.
ಉತ್ತರಪ್ರದೇಶ ಮೂಲದ ದೀಪ್ಚಂದ್ರ ಮತ್ತು ಕೇರಳದ ನಿಖಿಲ್ ಪ್ರಸಾದ್ ಮೃತಪಟ್ಟವರು. ಇನ್ನೊಬ್ಬರು ಗಂಭೀರ ಗಾಯಗೊಂಡು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂಆರ್ಪಿಎಲ್ ಘಟಕದಲ್ಲಿ ಶನಿವಾರ ಬೆಳಿಗ್ಗೆ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿದೆ. ಎಂಆರ್ಪಿಎಲ್ನ OM&S ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೆಟ್ರೋಲಿಯಂ ರಿಫೈನರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂಆರ್ಪಿಎಲ್ ನ ತ್ಯಾಜ್ಯ ತೈಲ ಸಂಗ್ರಹಣ ಘಟಕದಲ್ಲಿ ಲೆವೆಲ್ ಬದಲಾವಣೆ ಪರಿಶೀಲನೆಗೆ ತೆರಳಿದ್ದ ಕಾರ್ಮಿಕ ವಾಪಸ್ ಬಾರದೇ ಇದ್ದುದನ್ನು ಕಂಡು ಇನ್ನಿಬ್ಬರು ಕಾರ್ಮಿಕರು ತೆರಳಿದ್ದಾರೆ. ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ಸಂದರ್ಭ ದಾರಿ ಮಧ್ಯೆ ಇಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ, ಓರ್ವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತ್ಯಾಜ್ಯ ತೈಲ ಸಂಗ್ರಹ ಟ್ಯಾಂಕ್ನಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದ್ದು. ಕಾರ್ಮಿರಲ್ಲಿ ಒಬ್ಬರು ಕನ್ನಡಿಗರಾಗಿದ್ದು, ಇಬ್ಬರು ಹೊರ ರಾಜ್ಯದವರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.