Publish Date: Sat, 29 Sep 2018 (18:31 IST)
Updated Date: Sat, 29 Sep 2018 (18:34 IST)
ದಿನಗೂಲಿ ನೌಕರನೊರ್ವನಿಗೆ ಕೂಲಿ ಪಾವತಿಸದ ಸಾಮಾಜಿಕ ಅರಣ್ಯ ವಲಯಾಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶಿದ್ದು, ಅಮೀನ್ ದಾರರು ಅಧಿಕಾರಿಗಳಿಗಾಗಿ ಕಾದು, ಕಚೇರಿ ಅವಧಿ ಮುಗಿದ ನಂತರ ವಾಪಸ್ಸು ತೆರಳಿದ ಘಟನೆ ನಡೆದಿದೆ.
ಚಾಮರಾಜನಗರದಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಅರಣ್ಯ ವೀಕ್ಷಕನಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸಿದ್ದ ಥಾಮಸ್ ಎಂಬುವರಿಗೆ ಕಾರಣ ನೀಡದೆ ಕೆಲಸದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ 2003ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಚಾಮರಾಜನಗರದಲ್ಲಿ ನಡೆದಿತ್ತು. 2012 ರಲ್ಲಿ ಅಂತಿಮ ತೀರ್ಪು ಹೊರಬಂದು ವಜಾಗೊಂಡ ನೌಕರನಿಗೆ 105 ಲಕ್ಷ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಿತ್ತು. ಪರಿಹಾರ ನೀಡುವಲ್ಲಿ ಇಲಾಖೆ ಆರು ವರ್ಷ ವಿಳಂಬ ಮಾಡಿದ್ದರಿಂದ, ಎಂಟು ದಿನಗಳ ಹಿಂದೆ ಮತ್ತೊಂದು ಆದೇಶ ನೀಡಿದ ನ್ಯಾಯಾಲಯ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಹೇಳಿತ್ತು.
ಅದರಂತೆ ಅಮೀನ್ ದಾರರು ಕೋರ್ಟ್ ಆದೇಶದಂತೆ ಪೀಠೋಪಕರಣದ ಪಟ್ಟಿ ಮಾಡಿದ ನಂತರ, ಕಚೇರಿಯಲ್ಲಿದ್ದ ವಲಯ ಅರಣ್ಯಾಧಿಕಾರಿ ರವಿ, ವಜಾಗೊಂಡಿದ್ದ ನೌಕರ ಥಾಮಸ್ ಜೊತೆ ಹೊರ ಹೋದವರು ಸಂಜೆ ಕಚೇರಿ ಅವಧಿ ಮುಗಿಯುವವರೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಅಧಿಕಾರಿಗಳಿಗಾಗಿ ಕೋರ್ಟ್ ಅಮೀನರು ಕಾದು ಕುಳಿತಿದ್ದರು. ಕಚೇರಿ ಅವಧಿ ಮುಗಿದರೂ ಅಧಿಕಾರಿಗಳು ಬಾರದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸು ತೆರಳಿದರು.