Select Your Language

Notifications

webdunia
webdunia
webdunia
webdunia

ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ಸರಕಾರದ ಐದು ಯೋಜನೆಗಳು

ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ಸರಕಾರದ ಐದು ಯೋಜನೆಗಳು
bangalore , ಸೋಮವಾರ, 10 ಜನವರಿ 2022 (20:26 IST)
ಮಹಿಳೆಯರು ಸಮಾಜದ ಪ್ರಮುಖ ಭಾಗ. ಹಾಗಾಗಿ ಅವರನ್ನು ಸಬಲೀಕರಣಗೊಳಿಸದೆ ಈ ಸಮಾಜವು ಪರಿಪೂರ್ಣವಾಗುವುದಿಲ್ಲ. ಸಾಮಾನ್ಯವಾಗಿ ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಯೋಜನೆಗಳನ್ನು ಪ್ರಪಂಚದಾದ್ಯಂತ ಆಯಾ ದೇಶಗಳಲ್ಲಿ ಸರ್ಕಾರಗಳು ಆರಂಭಿಸಿವೆ. ಮಹಿಳೆಯರನ್ನು ಪೂಜಿಸುವ ಭಾರತದಲ್ಲೂ ಮಹಿಳಾ ಸಬಲೀಕರಣ ಹಾಗೂ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಆ ಮೂಲಕ ಅವರ ಜೀವನವನ್ನು ಉನ್ನತೀಕರಿಸಲು ಮತ್ತು ಲಿಂಗ ಸಮಾನತೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ.
ಹಲವಾರು ವರ್ಷಗಳಿಂದ ಲಿಂಗ ಸಮಾನತೆ ವಿಷಯವನ್ನು ವಾಸ್ತವಗೊಳಿಸುವ ಪ್ರಯತ್ನಗಳು ಸಮಾಜದಲ್ಲಿ ನಡೆಯುತ್ತಲೇ ಇದೆ. ಭಾರತ ಸರ್ಕಾರವು ಕೂಡ ಮಹಿಳೆಯರನ್ನು ಸಬಲೀಕರಣಗೊಳಿಸಲು ಆಸಕ್ತಿ ವಹಿಸಿದ್ದು, ಕಳೆದ ಹಲವು ವರ್ಷಗಳಲ್ಲಿ ನಾನಾ ಯೋಜನೆಗಳನ್ನು ಪ್ರಾರಂಭಿಸಿದೆ. ಕೆಲವಂತೂ ಇಂದಿಗೂ ಚಾಲ್ತಿಯಲ್ಲಿದೆ. ಬೇಟಿ ಬಚಾವೋ-ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಜನರು ಹೆಚ್ಚು ಮಾತನಾಡುತ್ತಿದ್ದಾರೆ.
ಹಾಗಾದರೆ, ಜನರು ಹೆಚ್ಚು ಮಾತನಾಡುತ್ತಿರುವ ಐದು ಯೋಜನೆಗಳ ಬಗ್ಗೆ ನಾವೀಗ ಮಾಹಿತಿ ನೀಡುತ್ತೇವೆ. ಇವು ದೇಶದಲ್ಲಿ ಮಹಿಳಾ ಸಬಲೀಕರಣ ಮತ್ತು ಕಲ್ಯಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದು ಗಮನಾರ್ಹ.
 
ಒನ್-ಸ್ಟಾಪ್ ಸೆಂಟರ್ ಸ್ಕೀಮ್ (ಒಎಸ್‌ಸಿ)
ಖಾಸಗಿ ಅಥವಾ ಸಾರ್ವಜನಿಕ ಪ್ರದೇಶ, ಮನೆ, ಸಮುದಾಯ ಅಥವಾ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ನಿಂದನೆಗೆ ಒಳಗಾದರೆ ಅವರ ಸಹಾಯಕ್ಕೆ ಧಾವಿಸಲು 2015 ರಲ್ಲಿ 'ಒಎಸ್‌ಸಿ' ಯೋಜನೆಯನ್ನು ಜಾರಿಗೆ ತರಲಾಗಿದೆ. ಒಎಸ್‌ಸಿ ಯೋಜನೆ ಅಡಿಯಲ್ಲಿ ದೈಹಿಕ, ಲೈಂಗಿಕ, ಮಾನಸಿಕ, ಭಾವನಾತ್ಮಕ ಮತ್ತು ಆರ್ಥಿಕ ನಿಂದನೆಯನ್ನು ಅನುಭವಿಸುವ ಮಹಿಳೆಯರಿಗೆ ಯಾವುದೇ ಷರತ್ತುಗಳಿಲ್ಲದೆ ಸಹಾಯ ಮತ್ತು ಪರಿಹಾರದೊಂದಿಗೆ ನೆರವು ನೀಡಲಾಗುತ್ತದೆ. ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸಾಚಾರ, ಕಳ್ಳಸಾಗಣೆ, ಗೌರವ ಸಂಬಂಧಿತ ಅಪರಾಧಗಳು, ಆಯಸಿಡ್ ದಾಳಿಗಳು ಅಥವಾ ಮಾಟಮಂತ್ರದಂತಹ ಹಿಂಸಾಚಾರವನ್ನು ಅನುಭವಿಸುತ್ತಿರುವ ಮಹಿಳೆಯರು ಈ ಯೋಜನೆ ಅಡಿ ವಿಶೇಷ ಸಹಾಯವನ್ನು ಪಡೆಯುತ್ತಾರೆ.
ಯಾವುದೇ ರೀತಿಯ ನಿಂದನೆಗೆ ಒಳಗಾದ ಮಹಿಳೆಯು ಈ ಯೋಜನೆಯಡಿ ಕೆಳಕಂಡ 3 ವಿಧಾನಗಳ ಮೂಲಕ ನೆರವು ಪಡೆಯಬಹುದು.
1) ಸ್ವಯಂಪ್ರೇರಿತ.
2) ಸಮಾಜದ ನಾಗರಿಕ, ಸಾರ್ವಜನಿಕ ಅಧಿಕಾರಿ, ಸಂಬಂಧಿ, ಸ್ನೇಹಿತ, ಸ್ವಯಂಸೇವಕ ಮುಂತಾದ ಯಾವುದೇ ವ್ಯಕ್ತಿಯ ಮೂಲಕ ಸಹಾಯ ಪಡೆಯಬಹುದು.
3) ಮಹಿಳಾ ಸಹಾಯವಾಣಿ (181) ಜೊತೆಗೆ ಪೊಲೀಸರು, ಆಂಬ್ಯುಲೆನ್ಸ್ ಮತ್ತು ಇತರ ತುರ್ತು ಪ್ರತಿಕ್ರಿಯೆ ಸೇವೆಗಳನ್ನು ಬಳಸಿಕೊಳ್ಳಬಹುದು.
 
ಉದ್ಯೋಗನಿರತ 'ಮಹಿಳಾ ಹೋಟೆಲ್ ಯೋಜನೆ'
ಉದ್ಯೋಗನಿರತ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರ ವಸತಿಗಳ ಸೌಭ್ಯಗಳನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಜತೆಗೆ ಅವರ ಮಕ್ಕಳಿಗೆ ಡೇ ಕೇರ್ ಸೌಲಭ್ಯ, ಮಹಿಳೆಯರಿಗೆ ಎಲ್ಲಿ ಉದ್ಯೋಗಾವಕಾಶಗಳು ಸಿಗುತ್ತವೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಹೊಸ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ, ಅಸ್ತಿತ್ವದಲ್ಲಿರುವ ಹಾಸ್ಟೆಲ್ ಕಟ್ಟಡಗಳ ವಿಸ್ತರಣೆ ಮತ್ತು ಬಾಡಿಗೆ ಜಾಗದಲ್ಲಿ ಹಾಸ್ಟೆಲ್ ಕಟ್ಟಡಗಳ ನಿರ್ಮಾಣದಂತಹ ಕೆಲಸಗಳಿಗೆ ಈ ಯೋಜನೆಯು ಹಣವನ್ನು ಒದಗಿಸುತ್ತದೆ. ಈ ಯೋಜನೆಯಿಂದ ನಿರ್ಮಾಣವಾದ ಮಹಿಳಾ ಹಾಸ್ಟೆಲ್‌ನಲ್ಲಿ ಯಾವುದೇ ಜಾತಿ, ಧರ್ಮ, ವೈವಾಹಿಕ ಸ್ಥಿತಿ ಅಥವಾ ಇತರ ಅಂಶಗಳನ್ನು ಲೆಕ್ಕಿಸದೆ ಉದ್ಯೋಗಸ್ಥ ಮಹಿಳೆಯರ ಅವಶ್ಯಕತೆಗಳನ್ನು ಪೂರೈಸುವ ಜೊತೆಗೆ ಆಶ್ರಯ ಕಲ್ಪಿಸಲಾಗುತ್ತದೆ.
 
ಸ್ವಾಧಾರ್ ಗ್ರೆಹ್
ಈ ಯೋಜನೆಯು ನೊಂದ ಮಹಿಳೆಯರಿಗೆ ಸಾಂತ್ವನ ಹಾಗೂ ನೈತಿಕ ಬೆಂಬಲ ನೀಡುವ ಜೊತೆಗೆ ಅವರು ಘನತೆ ಮತ್ತು ದೃಢವಾದ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಮಹಿಳೆಯರಿಗೆ ವಸತಿ, ಆಹಾರ, ಬಟ್ಟೆ, ಮತ್ತು ಆರೋಗ್ಯ ರಕ್ಷಣೆ, ಆರ್ಥಿಕ ಮತ್ತು ಸಾಮಾಜಿಕ ಸ್ಥಿರತೆಯನ್ನು ಒದಗಿಸುತ್ತದೆ. ಪ್ರತಿ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬೆಂಬಲದ ಕೊರತೆಯಿಂದ ಸಂಕಷ್ಟದಲ್ಲಿರುವ 30 ಮಹಿಳೆಯರಿಗೆ ವಸತಿ, ಆಹಾರ, ಬಟ್ಟೆ, ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿಯೇ ಸ್ವಾಧಾರ್ ಗೃಹ ಯೋಜನೆ ಜಾರಿಗೆ ತರಲಾಗಿದೆ. ಕೆಟ್ಟ ಸನ್ನಿವೇಶ, ಸಂದರ್ಭದಲ್ಲಿ ಸಿಲುಕಿ ಕುಗ್ಗಿ ಹೋದ ಹೆಣ್ಣುಮಕ್ಕಳಿಗೆ ಈ ಯೋಜನೆ ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಅವರಿಗೆ ಕಾನೂನು ನೆರವು ನೀಡುತ್ತದೆ. ಇದರಿಂದ ಈ ಮಹಿಳೆಯರು ತಮ್ಮ ಕುಟುಂಬ/ಸಮಾಜದ ಜೊತೆ ಹೊಸ ಬದುಕನ್ನು ನಡೆಸಬಹುದು.
 
ಮಹಿಳಾ ಶಕ್ತಿ ಕೇಂದ್ರ
ಮಹಿಳಾ ಶಕ್ತಿ ಕೇಂದ್ರ ಅಥವಾ ಎಂಎಸ್‌ಕೆ ಸಮುದಾಯದ ಸಹಭಾಗಿತ್ವದ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ಆಯಾ ಸರಕಾರಗಳಿಗೆ ರಾಷ್ಟ್ರೀಯ ಮಟ್ಟದ ಮತ್ತು ರಾಜ್ಯ ಮಟ್ಟದ ತಾಂತ್ರಿಕ ಬೆಂಬಲವನ್ನು ಇದು ಒದಗಿಸಲಿದೆ. ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ವಾತಾವರಣವನ್ನು ಸೃಷ್ಟಿಸಲು, ಆಯ್ದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ, ಸಮಾನತೆ, ಶಿಕ್ಷಣ, ವೃತ್ತಿ ಮತ್ತು ವೃತ್ತಿಪರ ಮಾರ್ಗದರ್ಶನ, ಉದ್ಯೋಗ, ಆರೋಗ್ಯ ಮತ್ತು ಸುರಕ್ಷತೆ, ಸಾಮಾಜಿಕ ಭದ್ರತೆ ಮತ್ತು ಡಿಜಿಟಲ್ ಸಾಕ್ಷರತೆಗೆ ಬೆಂಬಲವಾಗಿ ನಿಲ್ಲುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
 
ಉಜ್ವಲ ಯೋಜನೆ
ಮಾನವ ಕಳ್ಳಸಾಗಣೆಯನ್ನು ತಡೆಯಲು ಈ ಯೋಜನೆಯು ರೂಪುಗೊಂಡಿದೆ. ವಿಶೇಷವಾಗಿ ದುರ್ಬಲ ಪ್ರದೇಶಗಳು ಮತ್ತು ಕಡಿಮೆ ಜನಸಂಖ್ಯೆ ಇರುವ ಭಾಗಗಳಲ್ಲಿ ಕಳ್ಳಸಾಗಣೆಗೊಳಗಾದವರ ರಕ್ಷಣೆ, ಪುನರ್ವಸತಿ ಮತ್ತು ಮರುಸಂಘಟನೆಗಾಗಿ ಈ ಯೋಜನೆ ರೂಪುಗೊಂಡಿದೆ. ಮಾನವ ಕಳ್ಳಸಾಗಣೆ ತಡೆಯುವ ಉದ್ದೇಶ ಒಂದೆಡೆ ಇದ್ದರೆ, ಮತ್ತೊಂದೆಡೆ ಸಂತ್ರಸ್ತರನ್ನು ರಕ್ಷಿಸುವ ಹಾಗೂ ಪುನರ್ವಸತಿ ಕಲ್ಪಿಸುವ ಉದ್ದೇಶ ಹೊಂದಿದೆ. ಮಹಿಳೆಯರು ಮತ್ತು ಮಕ್ಕಳನ್ನು ವಾಣಿಜ್ಯ ಲೈಂಗಿಕ ಶೋಷಣೆಗಾಗಿ ಕಳ್ಳಸಾಗಣೆ ಮಾಡುವುದನ್ನು ತಡೆಯುವುದು, ಸಂತ್ರಸ್ತರನ್ನು ಅವರ ಶೋಷಣೆಯಿಂದ ರಕ್ಷಿಸಲು ಮತ್ತು ಸುರಕ್ಷಿತ ಕಸ್ಟಡಿಯಲ್ಲಿ ಇರಿಸಲು ಸಹಾಯ ಮಾಡಲಾಗುತ್ತದೆ. ಅದರ ಜೊತೆಗೆ ಮೂಲಭೂತ ಸೌಕರ್ಯಗಳು/ಅವಶ್ಯಕತೆಗಳನ್ನು ಒದಗಿಸುವ ಮೂಲಕ ಸಂತ್ರಸ್ತರಿಗೆ ತಕ್ಷಣದ ಮತ್ತು ದೀರ್ಘಕಾಲೀನ ಪುನರ್ವಸತಿ ಸೇವೆಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆಪ್ತ ಸಮಾಲೋಚನೆ, ಕಾನೂನು ನೆರವು ಮತ್ತು ಮಾರ್ಗದರ್ಶನ ಮತ್ತು ವೃತ್ತಿಪರ ತರಬೇತಿ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

55 ಗಂಟೆಗಳ ವೀಕೆಂಡ್ ಕರ್ಫ್ಯೂ ಅಂತ್ಯ: ಸಹಜಸ್ಥಿತಿಗೆ ಮರಳಿದ ರಾಜ್ಯ