Publish Date: Fri, 13 Mar 2020 (17:52 IST)
Updated Date: Fri, 13 Mar 2020 (17:56 IST)
ದೇಶದಾದ್ಯಂತ ತೀವ್ರ ಭೀತಿ ಸೃಷ್ಠಿಸಿರುವ ಕೋರೋನಾ ವೈರಸ್ ಸೋಂಕಿನಿಂದಾಗಿ ಕಲಬುರಗಿಯಲ್ಲಿ ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹೀಗಾಗಿ ಐಸೋಲೇಷನ್ ವಾರ್ಡ್ ಗಳನ್ನು ಸಿದ್ಧಪಡಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನಲ್ಲಿ 200 ಕ್ವಾರಂಟೈನ್ ವಾರ್ಡ್, 16 ಐಸೋಲೇಷನ್ ವಾರ್ಡ್ (2 ವೆಂಟಿಲೇಟರ್) ದೊಂದಿಗೆ ಚಿಕಿತ್ಸೆಗೆ ಸಿದ್ಧಗೊಂಡಿವೆ ಎಂದು ನವದೆಹಲಿಯ ಇ.ಎಸ್.ಐ.ಸಿ ಕಾರ್ಪೋರೇಷನ್ ಸದಸ್ಯ ಶಿವಪ್ರಸಾದ ತಿವಾರಿ ಹೇಳಿದ್ದಾರೆ.
ಕಲಬುರಗಿ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಇ.ಎಸ್.ಐ.ಸಿ ಐಸೋಲೇಷನ್ ವಾರ್ಡ್ನಲ್ಲಿ ಸೂಕ್ತ ಚಿಕಿತ್ಸೆಗೆ ಅಗತ್ಯವಿರುವ ಮೆಡಿಸಿನ್, ಮಾಸ್ಕ್ಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತಿದೆ. ಪ್ರಸ್ತುತ ಇಲ್ಲಿನ ಐಸೊಲೇಷನ್ಸ್ ವಾರ್ಡ್ನಲ್ಲಿ 4 ಜನರನ್ನು ಚಿಕಿತ್ಸೆಗೆ ಒಳಪಡಿಸಿದ್ದು, 24 ಗಂಟೆ ಕಾಲ ವೈದ್ಯ ಸಿಬ್ಬಂದಿ ರೋಗಿಗಳ ಮೇಲೆ ತೀವ್ರ ನಿಗಾ ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಬಯಸಿದಲ್ಲಿ ಇನ್ನೂ 200 ಕ್ವಾರಂಟೈನ್ ವಾರ್ಡ್ ತೆರೆಯಲು ಸಿದ್ಧ ಎಂದು ಶಿವಪ್ರಸಾದ ತಿವಾರಿ ತಿಳಿಸಿದ್ದಾರೆ.
ಸಾಮಾಜಿಕ ಸುರಕ್ಷತಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಇ.ಎಸ್.ಐ.ಸಿ. ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೊರೋನಾ ವೈರಸ್ ಸೊಂಕು ತಡೆಗಟ್ಟಲು ಸವಾಲಾಗಿ ಸ್ವೀಕರಿಸಿದೆ. ಹೊರದೇಶದಿಂದ ಬಂದವರಿಗೆ ಮಾತ್ರ ಕೊರೋನಾ ವೈರಸ್ ಸೋಂಕು ತಗಲಿದ್ದು, ಇದುವರೆಗಿನ ಪ್ರಕರಣಗಳಿಂದ ತಿಳಿದುಬಂದಿದೆ. ಕೊರೋನಾ ವೈರಸ್ ಮೂಲವಾಗಿ ಭಾರತದಲ್ಲಿ ಎಲ್ಲಿಯೂ ಹುಟ್ಟುಕೊಂಡಿಲ್ಲ ಎಂದು ಸ್ಪಷ್ಠಪಡಿಸಿದರು.