Publish Date: Tue, 26 Feb 2019 (17:49 IST)
Updated Date: Tue, 26 Feb 2019 (17:51 IST)
ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಆದರೆ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಕೊರತೆ ಇರುವುದು ಎದ್ದು ಕಂಡಿದೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯಕ್ಕೆ ಬೆಂಕಿಬಿದ್ದು ಸಾವಿರಾರು ಎಕರೆ ಭಸ್ಮವಾದ ಹಿನ್ನೆಲೆಯಲ್ಲಿ ಭೇಟಿ ನೀಡಿದರು.
ಬಂಡೀಪುರ ಅರಣ್ಯದಲ್ಲಿ ಸುಟ್ಟು ಕರಕಲಾಗಿರುವ ಭಾಗವನ್ನ ಪರಿಶೀಲನೆ ಮಾಡಿದ ಸಚಿವ ಪುಟ್ಟರಂಗಶೆಟ್ಟಿ, ಅರಣ್ಯದೊಳಗೆ ಸುಮಾರು 12 ಕಿ.ಮೀ ಒಳಗೆ ಪ್ರವೇಶ ಮಾಡಿ, ಪರಿಶೀಲನೆ ನಡೆಸಿದರು.
ಅರಣ್ಯದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನ ಮಾತನಾಡಿಸಿದರು. ಸ್ವಯಂ ಸೇವಕರು, ಕಾಡು ಕುರುಬರು ಸೇರಿದಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವರ ಬಗ್ಗೆ ಮಾಹಿತಿ ಪಡೆದುಕೊಂಡರು. ಅರಣ್ಯಕ್ಕೆ ಬೆಂಕಿ ಬಿದ್ದು ಆರು ದಿನಗಳೇ ಕಳೆದಿದ್ರೂ, ಸರಿಯಾದ ಮಾಹಿತಿ ಪಡೆಯದ ಸಚಿವ ಪುಟ್ಟರಂಗಶೆಟ್ಟಿ, ಮಾಧ್ಯಮದವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ಎಷ್ಟು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ? ಕಾರಣ ಏನು? ಮುಂದೇನು ಮಾಡುವುದು? ಎಂಬೆಲ್ಲ ಪ್ರಶ್ನೆಗಳಿಗೆ ನಿಖರವಾದ ಮಾಹಿತಿ ನೀಡಲಿಲ್ಲ. ಉಸ್ತುವಾರಿ ಸಚಿವರಾದ ಮೇಲೆ ಬಂಡೀಪುರಕ್ಕೆ ಒಮ್ಮೆಯೂ ಭೇಟಿ ನೀಡದ ಪುಟ್ಟರಂಗಶೆಟ್ಟಿ, ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.