Publish Date: Tue, 07 Mar 2023 (16:04 IST)
Updated Date: Tue, 07 Mar 2023 (16:15 IST)
ಚಾಮರಾಜನಗರ ಜಿಲ್ಲೆ ಗೂಳಿಪುರ ಗ್ರಾಮದಲ್ಲಿ ಪ್ರತಿ ವರ್ಷವು ಬಿಸಿಲು ಮಾರಮ್ಮ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತೆ. ಅದೇ ರೀತಿ ಈ ವರ್ಷವು ತುಂಬಾ ಸಡಗರದಿಂದ ಜಾತ್ರೆಯನ್ನು ಆಚರಿಸಲಾಯಿತು.
ಮೊದಲು ಗ್ರಾಮ ದೇವತೆ ಹಬ್ಬದ ಹಿನ್ನೆಲೆ ಮಾರಮ್ಮದೇವಿಗೆ ದೀಪ ಮತ್ತು ಧೂಪದ ನೈವೇದ್ಯ ಬೆಳಗಿಸಲಾಯಿತು. ಹಲವು
ಕಡೆಗಳಿಂದ ಆಗಮಿಸಿದ್ದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ದೇವಿಗೆ ತಂಬಿಟ್ಟು ಆರತಿ ಮಾಡುವ ಮೂಲಕ ಹರಕೆ ಸಲ್ಲಿಸಿದ್ರು. ಬಳಿಕ ಈ ಸನ್ನಿದಾನದ ಜಾತ್ರೆಯಲ್ಲಿ ಶ್ರೀ ಮಾರಮ್ಮನ ಭಕ್ತರು ಮುಳ್ಳಿನ ಪೊದೆಗೆ ಹಾರುವ ಮೂಲಕ ಮಾರಮ್ಮನಿಗೆ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ. ಅಷ್ಟು ಮುಳ್ಳು ಇರುವ ಜಾಗಕ್ಕೆ ಬಿದ್ದರೂ ಸಹ ಯಾರಿಗೂ ಕೂಡ ಯಾವುದೇ ರೀತಿಯ ನೋವುಗಳು ಸಂಭವಿಸದೇ ಇರುವುದು ಈ ಹಬ್ಬದ ಮತ್ತೊಂದು ವಿಶೇಷವಾಗಿದೆ. ಈ ದೃಶ್ಯವನ್ನು ನೋಡಲು ಸುತ್ತಮುತ್ತ ಗ್ರಾಮದ ಸಾವಿರಾರು ಜನರು ಕಾಯುತ್ತಾರೆ. ನೂರಾರು ವರ್ಷಗಳಿಂದ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿರುವ ಆಚರಣೆ ಇದಾಗಿದೆ. ಈ ರೀತಿ ಆಚರಣೆ ಮಾಡಿದರೆ ಮನೆಗೆ ಹಾಗೂ ಗ್ರಾಮಕ್ಕೆ ಒಳ್ಳೆಯದು ಎಂಬ ನಂಬಿಕೆ ಜನರಲ್ಲಿ ಇದೆ.