Publish Date: Mon, 16 Jan 2023 (19:18 IST)
Updated Date: Mon, 16 Jan 2023 (19:20 IST)
ಪಲ್ಸರ್ ಬೈಕ್ ಹತ್ತಿ ಹೊರಟರೆ ಸಾಕು, ಮಾರಕಾಸ್ತ್ರ ತೋರಿಸಿ ಕಂಡ ಕಂಡಲ್ಲಿ ಸುಲಿಗೆ ಮಾಡುತ್ತಿದ್ದ ಇಬ್ಬರು ನಟೋರಿಯಸ್ ಸುಲುಗೆಕೋರರನ್ನ ಕೊನೆಗೂ ರಾಜಗೋಪಾಲ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಐವತ್ತಕ್ಕೂ ಅಧಿಕ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಬ್ರಹಾರ್ ಹಾಗೂ ಅಫ್ತಾಬ್ ಬಂಧಿತ ಆರೋಪಿಗಳು.
ಕೆ.ಜಿ.ಹಳ್ಳಿಯ, ಡಿ.ಜೆ.ಹಳ್ಳಿ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಅಬ್ರಹಾರ್ ಹಾಗೂ ಮಿರಾಜ್ ಅಬ್ರಹಾರ್ ತಂಡ ಈ ಹಿಂದೆ ಶಿವಾಜಿನಗರದಲ್ಲಿ ಉದ್ಯಮಿಯೊಬ್ಬರನ್ನ ಹಾಡಹಗಲೇ ಸುಲಿಗೆ ಮಾಡಿ ಸುದ್ದಿಯಾಗಿತ್ತು. ಬಂಧನಕ್ಕೆ ತೆರಳಿದ್ದಾಗ ತುಮಕೂರು ಹಾಗೂ ಕೋಲಾರದಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಎಸ್ಕೇಪ್ ಆಗಿತ್ತು. ಸಲೀಂ ಎಂಬಾತನ ಹತ್ಯೆ ಪ್ರಕರಣದಲ್ಲಿ ಕೆ.ಜಿ ಹಳ್ಳಿ ಪೊಲೀಸರು ಈ ಇಬ್ಬರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದರು. ಪುಟ್ಟೇನಹಳ್ಳಿ ಬಳಿ ಆರೋಪಿಗಳನ್ನ ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ದಾಳಿ ಮಾಡಿತ್ತು. ಸದ್ಯ ಮಿರಾಜ್ ಅಬ್ರಹಾರ್ ಜೈಲಿನಲ್ಲಿದ್ದರೆ ಅಬ್ರಹಾರ್ ಹಾಗೂ ಅಫ್ತಾಬ್ ಹೊರಗಡೆ ದರೋಡೆಗಳಲ್ಲಿ ಸಕ್ರಿಯವಾಗಿದ್ದರು.
ರಾಜಗೋಪಲನಗರ, ಕಾಮಾಕ್ಷಿಪಾಳ್ಯ, ಕೆ.ಜಿ.ಹಳ್ಳಿ ಭಾಗದಲ್ಲಿ ಸುಲಿಗೆ ಮಾಡುತ್ತಿದ್ದ ಆರೋಪಿಗಳು ಇತ್ತೀಚಿಗೆ ಬಿಟಿಎಂ ಲೇಔಟ್ ನಲ್ಲಿ ಹಾಡಹಗಲೇ ರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಸುಲಿಗೆ ಮಾಡುವ ದೃಶ್ಯಗಳು ವೈರಲ್ ಆಗಿದ್ದವು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.