Publish Date: Mon, 15 May 2023 (20:40 IST)
Updated Date: Mon, 15 May 2023 (18:59 IST)
ನಿನ್ನೆ ರಾತ್ರಿ ನನಗೆ ಕಜಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ನಾನು ಮೊಬೈಲ್ ಸೈಲೆಂಟ್ ಮಾಡಿ ಮಲಗಿದ್ದೆ. ನನಗೆ ಮಿಸ್ಡ್ ಕಾಲ್ ಬಂದಿದೆ. ಕಜಕಿಸ್ತಾನದಿಂದ ವಾಟ್ಸಪ್ ಕಾಲ್ ಬಂದಿದೆ ಎಂದು ತಿಳಿಸಿದ್ರು. ಇದು ಹೇಡಿಗಳು ಮಾಡುವ ಕೆಲಸ. ಈ ಸಂಬಂಧ ನಾನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡುತ್ತಿದ್ದೇನೆ. ಜೈಲಿನಲ್ಲಿರುವಂತಹ ವ್ಯಕ್ತಿಯ ಡೈರಿಯಲ್ಲಿ ನನ್ನ ಹೆಸರು ಉಲ್ಲೇಖವಾಗಿತ್ತು. NIA ಅಧಿಕಾರಿಗಳು ತನಿಖೆ ನಡೆಸುವ ವೇಳೆ ಈ ಬಗ್ಗೆ ಬಹಿರಂಗವಾಗಿತ್ತು. ನಿನ್ನೆ ರಾತ್ರಿ ನನಗೆ ಬೆದರಿಕೆ ಕರೆ ಮತ್ತೆ ಬಂದಿದೆ ಎಂದು ತಿಳಿಸಿದ್ರು. ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ NIA ತನಿಖೆ ಮಾಡಿತ್ತು. ಸಾಹಿಲ್ ಶೇಖ್ ಎಂಬಾತನ ಬಂಧನವಾಗಿತ್ತು. ಆಗ ನನಗೂ ಬೆದರಿಕೆ ಇರುವುದು ಗೊತ್ತಾಗಿದೆ ಎಂದು ತಿಳಿಸಿದ್ರು. ರಾಷ್ಟ್ರ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಸುಮೊಟೊ ದೂರು ದಾಖಲಾಗಿದೆ. ಶಿರಸಿಯಲ್ಲೂ ಹಸಿರು ಧ್ವಜ ಹಾರಾಟವಾಗಿದೆ. ಪಾಕ್ ಪರ ಏಜೆಂಟರು ನಮ್ಮ ರಾಜ್ಯದಲ್ಲಿ ಚಿಗುರೊಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ರು.