Publish Date: Thu, 03 Oct 2024 (14:10 IST)
Updated Date: Thu, 03 Oct 2024 (14:14 IST)
ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಬಳಿಕ ಅವರ ಆಪ್ತ ಸಚಿವರಿಗೂ ಇಡಿ ಕಂಟಕ ಶುರುವಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಗೂ ಇಡಿ ನೋಟಿಸ್ ನೀಡಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡದಿದ್ದ ಜಮೀನು ಅಕ್ರಮ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿತ್ತು. ಇದಾದ ಬಳಿಕ ಸಾವಿರಾರು ಕೋಟಿ ಅಕ್ರಮವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯವೂ ಪ್ರಕರಣಕ್ಕೆ ಎಂಟ್ರಿ ಕೊಟ್ಟಿತ್ತು.
ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಇಡಿ ನೋಟಿಸ್ ಜಾರಿ ಮಾಡಿದೆ. ಇದೀಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಗೂ ಇಡಿ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗಲು ಭೈರತಿ ಸುರೇಶ್ ಗೆ ನೋಟಿಸ್ ನೀಡಿದೆ. ಇಂದು ಬೆಳಿಗ್ಗೆ ಹೆಬ್ಬಾಳದಲ್ಲಿರುವ ಭೈರತಿ ಸುರೇಶ್ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದಾರೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ತಮಗೆ ನೀಡಲಾಗಿದ್ದ ಸೈಟುಗಳನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಈಗಾಗಲೇ ಮರಳಿಸಿದ್ದಾರೆ. ಈ ಬಗ್ಗೆಯೂ ವಿವಾದ ಸೃಷ್ಟಿಯಾಗಿತ್ತು. ಪ್ರಕರಣ ತನಿಖಾ ಹಂತದಲ್ಲಿರುವಾಗ ಸೈಟು ವಾಪಸ್ ಮಾಡಿರುವುದು ಸರಿಯಲ್ಲ ಎಂದು ವಿಪಕ್ಷಗಳು ಅಪಸ್ವರವೆತ್ತಿದ್ದವು.