Publish Date: Fri, 20 Oct 2017 (19:24 IST)
Updated Date: Fri, 20 Oct 2017 (19:28 IST)
ಹುಬ್ಬಳ್ಳಿ: ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ನಂತರ ಮಾತನಾಡಿ ಅವರು, ನಾಲ್ಕು ವರ್ಷದಿಂದ ಸರ್ಕಾರದ ಸಾಧನೆ ಶೂನ್ಯವಾಗಿದೆ. ಯಾವುದೇ ಸಾಧನೆ ಮಾಡದೆ ಈಗ ಚುನಾವಣೆ ಸಮೀಸುತ್ತಿದ್ದಂತೆ ಸಾಧನಾ ಸಮಾವೇಶ ನಡೆಸಲು ಹೊರಟಿದೆ ಎಂದರು.
ರಾಜ್ಯದಲ್ಲಿ ಜನ ಅತಿವೃಷ್ಟಿಯಿಂದ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಾಧನಾ ಸಮಾವೇಶ ಮಾಡುವುದು ಬೇಕೆ ಎಂದು ಪ್ರಶ್ನಿಸಿದ್ದಾರೆ. ನಿಜವಾದ ಸಾಧನೆ ಮಾಡಿದ್ರೆ ವರ್ಷಕ್ಕೊಂದು ಸಮಾವೇಶ ಮಾಡಬೇಕಿತ್ತು. ಸರ್ಕಾರದ ಆಡಳಿತ ನಿಂತ ನೀರಾಗಿದೆ. ಸಮಾವೇಶಗಳಿಗೆ ಫಲಾನುಭವಿಗಳನ್ನು ಅಧಿಕಾರಿಗಳ ಮೂಲಕ ಆಮಿಷವೊಡ್ಡಿ ಕರೆದುಕೊಂಡು ಬರಲಾಗುತ್ತಿದೆ. ಸರ್ಕಾರವೇ ನೇರವಾಗಿ ಭ್ರಷ್ಟಾಚಾರಕ್ಕೆ ಇಂಬು ಕೊಡುತ್ತಿದೆ ಎಂದರು.