ಹಾಸನ: ಭೀಕರ ಕಾಳಗದಲ್ಲಿ ತನ್ನ ಒಂದು ದಂತ ಕಳೆದುಕೊಂಡು, ನೋವಿನಲ್ಲಿ ನರಳಾಡಿದ್ದ ಭೀಮ ಆನೆ ಇದೀಗ ಆರೋಗ್ಯವಾಗಿದ್ದಾನೆಂದು ಡಿಎಫ್ಓ ಸೌರಭ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಅವರು ಡ್ರೋನ್ ವಿಡಿಯೋ, ಫೋಟೋ ಜೊತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆ ವಿಡಿಯೋದಲ್ಲಿ ಭೀಮ ಮೈತುಂಬಾ ಕೆಸರು ಮೆತ್ತಿಕೊಂಡು ಆರಾಮಾಗಿ ಓಡಾಡುವುದು ಸೆರೆಯಾಗಿದೆ.
ಮೂರು ದಿನಗಳ ಹಿಂದೆ ಕ್ಯಾಪ್ಟನ್ ಆನೆ ಜತೆ ಭೀಮಾ ಭೀಕರ ಕಾಳಗ ನಡೆಸಿದ್ದು, ಈ ಸಂದರ್ಭದಲ್ಲಿ ಭೀಮಾ ತನ್ನ ಒಂದು ದಂತವನ್ನು ಕಳೆದುಕೊಂಡಿದ್ದಾನೆ.
ಎಡ ಬದಿಯ ದಂತ ಮುರಿದು ಬಿದ್ದು ಗಾಯಗೊಂಡಿತ್ತು. ಈ ಕಾಡಾನೆಯನ್ನು ಪರಿಶೀಲಿಸಿದ್ದು ಕಾಡಾನೆಯು ಆರೋಗ್ಯಕರವಾಗಿದೆ. ನೀರನ್ನು ಕುಡಿಯುತ್ತಿರುವುದು ಮತ್ತು ಹುಲ್ಲು ಹಾಗೂ ಇತರೆ ಮೇವನ್ನು ತಿನ್ನುತ್ತಿರುವುದನ್ನು ಗಮನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕಾಡಾನೆಯು ಕಾಳಗದ ನಂತರ ಬೇಲೂರು ತಾಲೂಕಿನ ಬಿಕ್ಕೋಡು ಭಾಗದಿಂದ ಸಕಲೇಶಪುರ ತಾಲೂಕಿನ, ಉದೇವಾರ ಭಾಗಕ್ಕೆ ತೆರಳಿ ಪುನಃ ಬೇಲೂರಿನ ಬಿಕ್ಕೋಡು ಭಾಗಕ್ಕೆ ಬಂದಿದೆ. ಪ್ರಸ್ತುತ ಬಿಕ್ಕೋಡು ಬಳಿಯ ಬಕ್ರವಳ್ಳಿ, ಕಿತ್ತಗೆರೆ ಭಾಗದಲ್ಲಿ ಇದೆ.
ಭೀಮಾ ಗಾಯಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅವರ ಆರೋಗ್ಯದ ಬಗ್ಗೆ ಊಹಾಪೋಹ ಸಂದೇಶಗಳು ಹರಿದಾಡುತ್ತಿದ್ದು. ಸಾರ್ವಜನಿಕರು ಇಂತಹ ಸಂದೇಶಗಳನ್ನು ನಂಬಬಾರದು. ಇಲಾಖಾ ಅನುಮತಿ ಪಡೆಯದೆ ವನ್ಯಜೀವಿಗಳ ಬಳಿ ತೆರಳಿ ಛಾಯಾಚಿತ್ರ ತೆಗೆಯುವುದು, ವೀಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.