ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಪುತ್ರ ಯತೀಂದ್ರನಿಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯನಾ ಎಂದು ಡಿಕೆ ಶಿವಕುಮಾರ್ ಬೆಂಬಲಿಗರುವ ಅಸಮಾಧಾನ ಹೊರಹಾಕುತ್ತಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭುಗಿಲೇಳುವುದಕ್ಕೆ ಯತೀಂದ್ರ ಹೇಳಿಕೆಯೂ ಕಾರಣ. ಹೈಕಮಾಂಡ್ ಸುಮ್ಮನಿರುವಂತೆ ಹೇಳಿದರೂ ಯತೀಂದ್ರ ಮಾಧ್ಯಮಗಳ ಮುಂದೆ ಪದೇ ಪದೇ ನಮ್ಮ ತಂದೆಯೇ ಐದು ವರ್ಷ ಸಿಎಂ ಎನ್ನುತ್ತಿರುವುದು ಡಿಕೆಶಿ ಬಳಗದ ಅಸಮಾಧಾನಕ್ಕೆ ಕಾರಣವಾಗಿದೆ.
ಇದೀಗ ಮತ್ತೆ ಯತೀಂದ್ರ ಹೇಳಿಕೆಯಿಂದ ಗೊಂದಲ ಉಂಟಾಗಿದೆ. ಇದಕ್ಕೆ ಡಿಕೆಶಿ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ. ಈ ಹಿಂದೆ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿ ಡಿಕೆ ಶಿವಕುಮಾರ್ ಪರ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿತ್ತು.
ಆದರೆ ಯತೀಂದ್ರ ಎರಡು ಬಾರಿ ಇಂತಹದ್ದೇ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಇಲ್ಲ ಯಾಕೆ ಎಂದು ಡಿಕೆಶಿ ಬೆಂಬಲಿಗ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ನಿನ್ನೆ ಶಾಸಕ ಬಾಲಕೃಷ್ಣ ಕೂಡಾ ಇದೇ ಪ್ರಶ್ನೆ ಮಾಡಿದ್ದಾರೆ. ಯತೀಂದ್ರ ವಿರುದ್ಧವೂ ಕ್ರಮ ಆಗಬೇಕು ಎಂದು ಡಿಕೆಶಿ ಬಳಗ ಒತ್ತಾಯಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.