ಬೆಂಗಳೂರು: ದೆಹಲಿಗೆ ಹೋಗುವ ಮುನ್ನ ನಾಯಕತ್ವ ವಿವಾದದ ಬಗ್ಗೆ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿದ್ದಾರೆ.
ಇಂದು ಪಂಚ ರಾಜ್ಯಗಳ ಚುನಾವಣೆ ತಯಾರಿ ಬಗ್ಗೆ ಪ್ರಿಯಾಂಕ ಗಾಂಧಿ ವಾದ್ರಾ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಬೆಳಿಗ್ಗೆ ದೆಹಲಿಗೆ ಹೋಗುವ ಮುನ್ನ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ದೆಹಲಿಗೆ ಹೋದ ಮೇಲೆ ಎಲ್ಲಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬರೋದೇ. ಚುನಾವಣೆ ತಯಾರಿ ಬಗ್ಗೆ ಮಾತನಾಡಲು ಎಐಸಿಸಿಯಿಂದ ಕರೆದಿದ್ದಾರೆ. ಅದಕ್ಕೆ ಹೋಗುತ್ತಿದ್ದೇನೆ. ನನಗೆ ಪ್ರತಿದಿನವೂ ಗುಡ್ ನ್ಯೂಸ್. ಪ್ರತಿದಿನವೂ ಸವಾಲುಗಳು, ಕಷ್ಟಗಳು ಇದ್ದೇ ಇರುತ್ತವೆ. ಟೀಕೆಗಳೂ ಬರುತ್ತಾ ಇರುತ್ತದೆ, ಎದುರಿಸಿ ಕೆಲಸ ಮುಂದುವರಿಸಬೇಕು ಎಂದಿದ್ದಾರೆ.
ಇನ್ನು, ನಾಯಕತ್ವ ವಿವಾದದ ಬಗ್ಗೆ ಮಾತನಾಡುತ್ತೀರಾ ಎಂದು ಕೇಳಿದ್ದಕ್ಕೆ ಗೊಂದಲ ಏನೂ ಇಲ್ಲ. ನನಗೆ ಯಾವುದೇ ಗೊಂದಲ ಇಲ್ಲ. ನಾನು ಸಿದ್ದರಾಮಯ್ಯನವರು ಏನು ಮಾತನಾಡಿದ್ದೀವಿ ಎಂದು ನಮಗೆ ಗೊತ್ತು. ನಾವು ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಮಾತನಾಡಿದ್ದೀವಿ. ಬೇರೆಯವರು ಇದರ ಬಗ್ಗೆ ಟೆನ್ಷನ್ ತೆಗೆದುಕೊಳ್ಳುವುದು ಹೇಳಿಕೆ ಕೊಡುವುದರಿಂದ ಯಾವ ಪ್ರಯೋಜನವೂ ಆಗಲ್ಲ. ಅದು ಯಾರೇ ಹೇಳಿಕೆ ಕೊಡುತ್ತಿದ್ದರೂ ಅದು ಪಕ್ಷಕ್ಕೆ ಡ್ಯಾಮೇಜ್ ಅಷ್ಟೇ ಬೇರೇನಿಲ್ಲ ಎಂದಿದ್ದಾರೆ.