Publish Date: Thu, 20 Sep 2018 (17:01 IST)
Updated Date: Thu, 20 Sep 2018 (17:03 IST)
ಉತ್ತರ ಕರ್ನಾಟಕದಲ್ಲಿ ಮಳೆಯ ಅಭಾವ ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಮುದ್ರಣ ಕಾಶಿ ಗದಗ ಜಿಲ್ಲೆಯ ಹಲವೆಡೆ ನಿರಂತರ ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಗದಗ ನಗರದ ಬೆಟಗೇರಿಯ ವಾಂಬೆ ನಗರದಲ್ಲಿ ಮಳೆ ನೀರಿನ ಅವಾಂತರಕ್ಕೆ ಜನತೆ ಕಂಗಾಲಾಗಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರು ಪರದಾಡ್ತಿದಾರೆ. ಮಳೆರಾಯನ ಅವಾಂತರಕ್ಕೆ ರಾತ್ರಿ ಇಡಿ ವಾಂಬೆ ನಗರದ ಜನತೆ ಜಾಗರಣೆ ಮಾಡಿದ್ದಾರೆ. ಅಲ್ಲದೇ ಗದಗ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ರಸ್ತೆಯ ಮೇಲೆ ಚರಂಡಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಗಂಗಿಮಡಿ, ಬೆಟಗೇರಿಯ ಯಡಿಯೂರು ಸಿದ್ದಲಿಂಗೇಶ್ವರ ಕಾಲೋನಿ, ಉಸಕಿನಕಟ್ಟಿಯಲ್ಲಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಇನ್ನು ಜಿಲ್ಲೆಯ ಹಲವೆಡೆ ಭಾರೀ ಮಳೆ ಹಿನ್ನೆಲೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ. ಗದಗ-ಬೆಟಗೇರಿ ನಗರಸಭೆ ಕೈಗೊಂಡಿರೋ ರಸ್ತೆ ಕಾಮಗಾರಿ ಹಾಗೂ ಒಳಚರಂಡಿ ಕಾಮಗಾರಿಗಳು ಕಳಪೆ ಮಟ್ಟ ಮತ್ತು ಅಪೂರ್ಣಗೊಂಡಿದ್ದೇ ಈ ಎಲ್ಲ ಅನಾಹುತಗಳಿಗೆ ಕಾರಣ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಗದಗ ಶಾಸಕ ಹೆಚ್. ಕೆ. ಪಾಟೀಲ್ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿದ್ದಾರೆ. ಇಷ್ಟು ದಿನ ಇಲ್ಲದ ಮಳೆಯ ಅಬ್ಬರ ಮೂರು ದಿನಗಳಿಂದ ಪ್ರತಾಪ ತೋರುತ್ತಿದ್ದು ನಿವಾಸಿಗಳಿಗೆ ತೊಂದರೆ ಉಂಟು ಮಾಡಿದೆ.