Publish Date: Sat, 27 Jul 2019 (09:06 IST)
Updated Date: Sat, 27 Jul 2019 (09:08 IST)
ಬೆಂಗಳೂರು: ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರಿದಷ್ಟು ಸುಲಭವಾಗಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತಾ ಎನ್ನುವುದೇ ಎಲ್ಲರ ಪ್ರಶ್ನೆ.
2018 ರಲ್ಲೂ ಹೀಗೇ ಆಗಿತ್ತು. ಯಡಿಯೂರಪ್ಪ ಅಧಿಕಾರಕ್ಕೇರಿದ ಎರಡೇ ದಿನದಲ್ಲಿ ಬಹುಮತ ಸಾಬೀತುಪಡಿಸಲಾಗದೇ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಈಗಲೂ ಬಿಜೆಪಿಗೆ ಸಂಖ್ಯಾ ಬಲವಿಲ್ಲದೇ ಅಧಿಕಾರಕ್ಕೇರಿ ಯಡಿಯೂರಪ್ಪ ಮತ್ತೆ ತಪ್ಪು ಮಾಡಿದರಾ ಎಂಬ ಚರ್ಚೆಯನ್ನು ಜನರೇ ಸೋಷಿಯಲ್ ಮೀಡಿಯಾದಲ್ಲಿ ನಡೆಸುತ್ತಿದ್ದಾರೆ.
ಇದು ಬಹುಶಃ ಹೈಕಮಾಂಡ್ ನಿರ್ದೇಶನದಂತೆ ನಡೆದ ತೀರ್ಮಾನವಾಗಿರಲು ಸಾಧ್ಯವೇ ಇಲ್ಲ. ಅಧಿಕಾರಕ್ಕೇರಲೇ ಬೇಕು ಎಂಬ ಯಡಿಯೂರಪ್ಪನವರ ಹಠದಿಂದ ಈ ತೀರ್ಮಾನಕ್ಕೆ ಬಂದಿರಬಹುದು ಎಂದು ಟ್ವಿಟರಿಗರು ಚರ್ಚೆ ಮಾಡುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಸೂಚನೆ ಕೊಟ್ಟಿದ್ದರೆ ಮೊನ್ನೆ ದೆಹಲಿಯಲ್ಲಿ ಅಮಿತ್ ಶಾ ಭೇಟಿಯ ತಕ್ಷಣವೇ ಬಿಜೆಪಿ ನಾಯಕರು ಸರ್ಕಾರ ರಚನೆಗೆ ಮುಂದಾಗುತ್ತಿದ್ದರು.
ಆದರೆ ಇದೆಲ್ಲವೂ ರಾಜ್ಯ ನಾಯಕರದ್ದೇ ತಂತ್ರವಾಗಿರಬಹುದು ಎಂಬುದು ಜನರ ಅಭಿಪ್ರಾಯ. ಒಂದು ವೇಳೆ ಈ ಬಾರಿಯೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಸರ್ಕಾರ ಬಿದ್ದು ಹೋದರೆ ಅಥವಾ ಇನ್ನೂ ರಾಜೀನಾಮೆ ಇತ್ಯರ್ಥವಾಗದ ಶಾಸಕರು ಬಿಜೆಪಿ ಪರ ವಿಶ್ವಾಸ ಮತ ಚಲಾಯಿಸಿದರೆ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ.