Publish Date: Mon, 03 Jan 2022 (14:08 IST)
Updated Date: Mon, 03 Jan 2022 (15:58 IST)
ಕೋವಿಡ್ ಮೂರನೆ ಅಲೆಯ ಊಹಾಪೋಹಗಳ ನಡುವೆ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಶೇ.241ಪಟ್ಟು ಏರಿಕೆಯಾಗಿದ್ದು, ಮಹಾರಾಷ್ಟ್ರ, ನವದೆಹಲಿ, ಗುಜರಾತ್ ಸೇರಿ ಐದು ರಾಜ್ಯಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಕೇಂದ್ರ ಸರ್ಕಾರ ಮೇಲಿಂದ ಮೇಲೆ ರಾಜ್ಯ ಸರ್ಕಾರಗಳಿಗೆ ಪತ್ರಗಳನ್ನು ಬರೆದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದೆ.
ಸೋಂಕು ಅಂಕೆ ಮೀರಿ ಏರಿಕೆಯಾಗುತ್ತಿದೆ. ಆತಂಕಕಾರಿ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ದಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಸೋಂಕು ವೇಗವಾಗಿ ಹರಡಲಾರಂಭಿಸಿದೆ. ಭಾನುವಾರ 1,187 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 10,292ರಷ್ಟಾಗಿವೆ. ಬೆಂಗಳೂರು ನಗರವೊಂದರಲ್ಲೇ 8671 ದಾಖಲಾಗಿವೆ. ಹೊಸದಾಗಿ ಆರು ಸಾವುಗಳಾಗಿದ್ದು, ಅದರಲ್ಲಿ ಬೆಂಗಳೂರು ನಗರದಲ್ಲಿ ಮೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಹೊಸ ಸೋಂಕಿನ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 923, ದಕ್ಷಿಣ ಕನ್ನಡ ದಲ್ಲಿ 63, ಉಡುಪಿಯಲ್ಲಿ 54, ಮೈಸೂರಿ ನಲ್ಲಿ 20, ಬೆಳಗಾವಿಯಲ್ಲಿ 12, ತುಮಕೂರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ತಲಾ 10 ಪ್ರಕರಣಗಳು ವರದಿಯಾಗಿವೆ. ಹಲವು ತಿಂಗಳಿಂದಲೂ ಶೇ.1ರ ಒಳಗೆ ನಿಯಂತ್ರಣ ದಲ್ಲಿದ್ದ ಸೋಂಕು, ನಿನ್ನೆ ಶೇ.1.08ರಷ್ಟಾಗಿದೆ. ಸಾವಿನ ಪ್ರಮಾಣವೂ ಶೇ.0.5ರಷ್ಟಾಗಿದೆ.