Publish Date: Mon, 16 Mar 2020 (18:24 IST)
Updated Date: Mon, 16 Mar 2020 (18:26 IST)
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಕ್ಕಳಾಗುವ ಹರಕೆ ಹೊರಲು ಮಹಿಳೆಯರು ಹಿಂದೇಟು ಹಾಕುವಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗಾನಕುಂಟೆ ಗ್ರಾಮದ ಶ್ರೀ ಗಂಗಾಭಾಗೀರಥಿ ದೇವಾಲಯವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಗಂಗಾಭಾಗೀರಥಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೀಗಾಗಿ ಪ್ರತಿ ಸೋಮವಾರ ದೇವಾಲಯಕ್ಕೆ ಬರುತ್ತಿದ್ದ ಭಕ್ತರು ಎಂದಿನಂತೆ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ದೇವರ ದರ್ಶನ ಸಿಗದೆ ಮರಳಿದ್ದಾರೆ. ಪ್ರವೇಶ ದ್ವಾರಗಳಲ್ಲಿ ದೇವಸ್ಥಾನ ಬಂದ್ ಆಗಿರುವ ನಾಮಫಲಕ ಹಾಕಲಾಗಿದೆ.
ನಾಲ್ಕೂ ಕಡೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಗ್ರಾಮ ಸಹಾಯಕರು, ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ವಾಪಸ್ ಕಳುಹಿಸಲಾಗುತ್ತಿದೆ. ಹೀಗಾಗಿ ದೂರದೂರುಗಳಿಂದ ಬಂದ ಭಕ್ತರು ಗಂಗಾದೇವಿಯ ದರ್ಶನ ಪಡೆಯಲಾಗದೆ ನಿರಾಸೆಯಿಂದ ತೆರಳುತ್ತಿದ್ದಾರೆ.
ಸಂತಾನಭಾಗ್ಯ ಇಲ್ಲದವರು ಈ ಗಂಗಾಭಾಗೀರಥಿಗೆ ಪ್ರತಿ ಸೋಮವಾರ ಆಗಮಿಸಿ ದೇವಾಯಲದ ಆವರಣದಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ದೇವಿಗೆ ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ.