Publish Date: Thu, 22 Jan 2026 (11:25 IST)
Updated Date: Thu, 22 Jan 2026 (11:27 IST)
ಬೆಂಗಳೂರು: ಸಂಘರ್ಷಗಳ ಬಳಿಕ ಕೊನೆಗೂ ಇಂದು ರಾಜ್ಯಪಾಲರು ಅಧಿವೇಶನದಲ್ಲಿ ಭಾಷಣ ಮಾಡಲು ವಿಧಾನಸೌಧಕ್ಕೆ ಬಂದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸ್ವಾಗತಿಸಿದ್ದಾರೆ.
ಮನರೇಗಾ ಯೋಜನೆಗೆ ತಿದ್ದುಪಡಿ ಮಾಡಿದ ಕೇಂದ್ರದ ವಿರುದ್ಧ ಚರ್ಚೆಗೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ಮೊದಲು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೆ ಭಾಷಣ ಮಾಡಬೇಕಿತ್ತು. ಆದರೆ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೆಲವು ತಿದ್ದುಪಡಿಗೆ ಸೂಚಿಸಿದ್ದ ರಾಜ್ಯಪಾಲರು ಇಲ್ಲದೇ ಹೋದರೆ ಭಾಷಣ ಮಾಡಲ್ಲ ಎಂದಿದ್ದರು.
ಇದು ರಾಜ್ಯ ಸರ್ಕಾರ ಮತ್ತು ಗವರ್ನರ್ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಈಗ ಕೊನೆಗೂ ರಾಜ್ಯಪಾಲರು ವಿಧಾನಸೌಧಕ್ಕೆ ಬಂದಿದ್ದಾರೆ. ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್ ಸ್ವಾಗತಿಸಿದ್ದು ವಿಧಾನಸೌಧದೊಳಗೆ ಕರೆತಂದಿದ್ದಾರೆ.
ಇಂದು, ಭಾಷಣದಲ್ಲಿ ಸರ್ಕಾರ ಸಿದ್ಧಪಡಿಸಿರುವ ಎಲ್ಲಾ ಅಂಶಗಳನ್ನು ಗವರ್ನರ್ ಓದುವ ಸಾಧ್ಯತೆಯಿಲ್ಲ. ಕೇಂದ್ರದ ವಿರುದ್ಧ ಇರುವ ಕೆಲವು ಅಂಶಗಳನ್ನು ಕೈ ಬಿಟ್ಟು ಭಾಷಣ ಮಾಡುವ ಸಾಧ್ಯತೆಯಿದೆ. ಸದ್ಯಕ್ಕೆ ಅವರು ಅಧಿವೇಶನಕ್ಕೆ ಬಂದಿರುವುದರಿಂದ ಕೊಂಚ ಮಟ್ಟಿಗೆ ವಿವಾದ ತಣ್ಣಗಾಗಿದೆ.