ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆಯೇ ಒಡಕು ಮೂಡಿದೆ. ನನ್ನನ್ನೂ ಕರಿಬಹುದಿತ್ತು ಎಂದು ಈಗ ಪ್ರಮುಖ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕುಸ್ತಿ ಕದನವೆಲ್ಲಾ ತಿಳಿಯಾಗಿದೆ ಎಂದು ಸಾರಲು ಇಂದು ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ಮೊನ್ನೆ ಸಿದ್ದು ನಿವಾಸದಲ್ಲಿ ಡಿಕೆಶಿ ಬ್ರೇಕ್ ಫಾಸ್ಟ್ ಮಾಡಿದ್ದರು. ಆದರೆ ಈಗ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆಯೇ ಗೃಹಸಚಿವ ಜಿ ಪರಮೇಶ್ವರ್ ತಮ್ಮ ಆಕ್ಷೇಪ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಈಗ ಎಲ್ಲಾ ಗೊಂದಲಗಳೂ ತಿಳಿಯಾಗಿದೆ ಎಂಬುದು ಖುಷಿಯ ವಿಚಾರ. ಸಿಎಂ ಮತ್ತು ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ನನ್ನನ್ನೂ ಕರೆದಿದ್ದರೆ ನಾನೂ ಹೋಗುತ್ತಿದ್ದೆ. ಆದರೆ ನನ್ನನ್ನು ಕರೆದಿಲ್ಲ ಎಂದು ಅಪಸ್ವರವೆತ್ತಿದ್ದಾರೆ.
ಇನ್ನು ತಾವೂ ಸಿಎಂ ಆಗಬೇಕೆಂಬುದು ಅಭಿಮಾನಿಗಳ ಬಯಕೆ ಸಹಜ ಎಂದಿದ್ದಾರೆ. ಎಲ್ಲಾ ನಾಯಕರಿಗೂ ಸಿಎಂ ಆಗಬೇಕು ಎಂಬ ಆಸೆಯಿರುತ್ತದೆ. ನಮ್ಮ ನಾಯಕ ಸಿಎಂ ಆಗಲಿ ಎಂದು ಎಲ್ಲಾ ನಾಯಕರ ಅಭಿಮಾನಿಗಳೂ ಬಯಸುತ್ತಾರೆ. ಅದೇ ರೀತಿ ನನ್ನ ಅಭಿಮಾನಿಗಳೂ ಬಯಸುತ್ತಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.