Publish Date: Sat, 21 Sep 2024 (11:20 IST)
Updated Date: Sat, 21 Sep 2024 (11:30 IST)
ಬೆಂಗಳೂರು: ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕೋಮುಗಲಭೆಗಳ ಬಗ್ಗೆ ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಗರಂ ಆದ ಘಟನೆ ನಡೆದಿದೆ.
ಮೊದಲು ನಾಗಮಂಗಲದಲ್ಲಿ ಮತ್ತು ನಂತರ ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕೋಮುಗಲಭೆಯಾಗಿತ್ತು. ಬೆಳಗಾವಿಯಲ್ಲೂ ಸಣ್ಣ ಮಟ್ಟಿನ ಪ್ರತಿಭಟನೆ ಕಂಡುಬಂದಿತ್ತು. ಈ ಗಲಾಟೆಗಳ ಬಗ್ಗೆ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ ಅವರು ಕೊಂಚ ಗರಂ ಆದರು.
ಇತ್ತೀಚೆಗೆ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಗಳ ಬಗ್ಗೆ ಏನು ಹೇಳ್ತೀರಿ ಎಂದಾಗ ಗರಂ ಆದ ಸಿಎಂ ಸಿದ್ದು, ರಾಜ್ಯದಲ್ಲಿ ಎಷ್ಟು ಗಣೇಶ ಮೂರ್ತಿಗಳಿತ್ತಯ್ಯಾ? ಸುಮಾರು 40 ಸಾವಿರ ಮೂರ್ತಿಗಳನ್ನಿಟ್ಟಿದ್ರು. ಅದರಲ್ಲಿ ಗಲಭೆಯಾಗಿದ್ದು ಕೇವಲ ಎರಡು ಕಡೆ ಮಾತ್ರ. ಒಂದು ನಾಗಮಮಂಗಲದಲ್ಲಿ ಇನ್ನೊಂದು ದಾವಣಗೆರೆಯಲ್ಲಿ. ದಾವಣಗೆರೆಯಲ್ಲಿ ಬರೀ ಕಲ್ಲು ತೂರಾಟ ಆಗಿತ್ತಷ್ಟೇ. ಆದರೆ ನೀವು ಎಲ್ಲಾ ಕಡೆ ಗಲಾಟೆ ಆಗಿದೆ ಎನ್ನುವ ಹಾಗೆ ಪ್ರಶ್ನಿಸುತ್ತಿದ್ದೀರಿ. ಎರಡು ಗಲಭೆ ಪ್ರಕರಣ ಅಂತ ಮಾತ್ರ ಹೇಳಿ ಎಂದು ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದರು.
ಬಳಿಕ ಈ ಎಲ್ಲಾ ಘಟನೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಅವರು ಎಲ್ಲಾ ಮಾಡ್ತಾರೆ ಎಂದಿದ್ದಾರೆ. ಇನ್ನು ಈ ಗಲಭೆ ವಿಚಾರವನ್ನು ಬಿಜೆಪಿಯವರು ದೊಡ್ಡದು ಮಾಡುತ್ತಿದ್ದಾರೆ ಎಂದು ಸಿದ್ದು ಹೇಳಿದ್ದಾರೆ.
ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅದಕ್ಕೇ ಎರಡು ಕೋಮುಗಲಭೆಯನ್ನೇ ದೊಡ್ಡ ವಿಚಾರ, ರಾಜ್ಯದಲ್ಲಿ ಶಾಂತಿ ಹಾಳಾಗಿದೆ ಎಂದೆಲ್ಲಾ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.