Publish Date: Mon, 26 Nov 2018 (09:32 IST)
Updated Date: Mon, 26 Nov 2018 (09:36 IST)
ಮಂಡ್ಯ: ಮೊನ್ನೆ ಇಹಲೋಕ ತ್ಯಜಿಸಿದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅಂತ್ಯಕ್ರಿಯೆಯನ್ನು ಸರ್ಕಾರಿ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸುತ್ತಿರುವ ಬಗ್ಗೆ ತಕರಾರು ತೆಗೆದವರಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಒಬ್ಬ ನಟನ ಅಂತ್ಯಕ್ರಿಯೆ ನಡೆಸಲು ಸರ್ಕಾರಿ ಜಮೀನಿನ ಬಳಕೆ ಮಾಡುವುದರ ಬಗ್ಗೆ ವಕೀಲರೊಬ್ಬರು ತಕರಾರು ಅರ್ಜಿ ಸಲ್ಲಿಸಲು ಯೋಜನೆ ನಡೆಸುತ್ತಿರುವುದರ ಬಗ್ಗೆ ಮಾಧ್ಯಮದಲ್ಲಿ ಓದಿದ್ದೇನೆ. ಒಬ್ಬ ಕಲಾವಿದನಾಗಿ ಅಂಬರೀಶ್ ನಾಡಿನ ಜನತೆಗೆ ಸಲ್ಲಿಸಿರುವ ಸೇವೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇಂತಹ ಸಮಯದಲ್ಲಿ ಅವರ ಕ್ಷುಲ್ಲುಕ ಕಾರಣವಿಟ್ಟುಕೊಂಡು ಅಡ್ಡಿ ಪಡಿಸುವ ಸಣ್ಣ ಮನಸ್ಸು ತೋರಿಸುವವರು ಅವರೇ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.
ಅಂಬರೀಶ್ ನನ್ನ ಆತ್ಮೀಯ ಸ್ನೇಹಿತರೂ ಕೂಡಾ. ನನಗೆ ಹಿರಿಯಣ್ಣನಿದ್ದಂತೆ. ಸದಾ ಬೆನ್ನ ಹಿಂದೆ ನಿಂತು, ತಪ್ಪು ಮಾಡುವಾಗ ಕರೆ ಮಾಡಿ ಹೀಗೆ ಮಾಡಬೇಡ, ನಿನ್ನೆ ಸೇವೆ ನಾಡಿಗೆ ಇನ್ನೂ ಬೇಕು ಎಂದು ಎಚ್ಚರಿಸುವ ವ್ಯಕ್ತಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಬಣ್ಣದ ಲೋಕ ಪ್ರಾರಂಭವಾದ ಕಂಠೀರವ ಸ್ಟುಡಿಯೋದಲ್ಲೇ ಮಣ್ಣಲ್ಲಿ ಮಣ್ಣಾಗಿಸಬೇಕೆಂಬ ಎಲ್ಲರ ಆಶಯದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಈ ನಡುವೆ ನಿನ್ನೆ ನಿಧನರಾದ ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್ ಅಂತ್ಯ ಕ್ರಿಯೆಯನ್ನೂ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.