Publish Date: Sat, 23 Feb 2019 (17:25 IST)
Updated Date: Sat, 23 Feb 2019 (17:27 IST)
ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ತಾರತಮ್ಯ ನಿವಾರಣೆಗಾಗಿ ಹಾಗೂ ಬಲವರ್ಧನೆಗಾಗಿ ರಾಘವೇಂದ್ರ ಔರಾದಕರ ಸಮಿತಿ ನೀಡಿರುವ ವರದಿಯ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಕಲಬುರಗಿ ನಗರದ ಹಳೆಯ ಐಜಿಪಿ ಕಚೇರಿಯಲ್ಲಿ ಪ್ರಾರಂಭಿಸಲಾದ ಪೊಲೀಸ್ ಆಯುಕ್ತಾಲಯ ಕಚೇರಿ ಉದ್ಘಾಟಿಸಿದ ನಂತರ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಈಗಾಗಲೇ ಔರಾದಕರ ಸಮಿತಿ ವರದಿಯ ಅನುಷ್ಠಾನಕ್ಕೆ ಮೂರು ಸಭೆಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯಲ್ಲಿರುವ ಹುದ್ದೆಗಳ ಅಸಮಾನತೆಯನ್ನು ಬಗೆಹರಿಸಿ ನ್ಯಾಯ ಒದಗಿಸಲು ಇನ್ನೊಂದು ಮಟ್ಟದ ಸಭೆಯನ್ನು ಕೈಗೊಳ್ಳಬೇಕಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಜೀವನ ಸುಧಾರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಪೊಲೀಸ್ ಇಲಾಖೆಯ ಸಂಪೂರ್ಣ ಬಲವರ್ಧನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಎಕ್ಸಿಕ್ಯೂಟಿವ್ ಕರ್ತವ್ಯ ಸಲ್ಲಿಸಿದವರು ಮಾತ್ರ ನಾನ್ ಎಕ್ಸಿಕ್ಯೂಟಿವ್ ಕರ್ತವ್ಯಕ್ಕೆ ನೇಮಿಸುವುದನ್ನು ಕಾಯಿದೆ ರೂಪದಲ್ಲಿ ಜಾರಿಗೊಳಿಸಲಾಗುತ್ತಿದೆ. ತರಬೇತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹೆಚ್ಚುವರಿ ಪ್ರೋತ್ಸಾಹ ವೇತನ ನೀಡಲು ಯೋಚಿಸಲಾಗುತ್ತಿದೆ ಎಂದರು.