Publish Date: Wed, 29 Oct 2025 (09:11 IST)
Updated Date: Wed, 29 Oct 2025 (09:14 IST)
ಚಿಕ್ಕಮಗಳೂರು: ಇಲ್ಲಿನ ಪ್ರಾಥಮಿಕ ಶಾಲೆಯೊಂದರ ಅತಿಥಿ ಶಿಕ್ಷಕಿ ಮೇಲೆ ಯುವಕರ ಗುಂಪು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯವೆಸಗಿದೆ. ಆಕೆ ಭಯದಿಂದ ಕಿರುಚಿಕೊಂಡಾಗ ದುರುಳರು ಮಾಡಿದ್ದೇನು ಗೊತ್ತಾ?
ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದೆ. ಬಸರೀಕಟ್ಟೆ ಗ್ರಾಮದ ಶಾಲೆಯೊಂದರಲ್ಲಿ ಯುವತಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನಿನ್ನೆ ಇದೇ ರೀತಿ ಶಾಲೆ ಮುಗಿಸಿ ಶಿಕ್ಷಕಿ ಮನೆಗೆ ಮರಳುತ್ತಿದ್ದಾಗ ಯುವಕರ ಗುಂಪು ಆಕೆಯನ್ನು ಅಡ್ಡಗಟ್ಟಿದೆ.
ನಿರ್ಜನ ಪ್ರದೇಶಕ್ಕೆ ಶಿಕ್ಷಕಿ ಬರುತ್ತಿದ್ದಂತೇ ಆಕೆಯ ಮೇಲೆರಗಿದ ದುರುಳರು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಆಕೆ ಕಿರುಚಿಕೊಂಡಿದ್ದಕ್ಕೆ ಬಾಯಿಗೆ ಮಣ್ಣು ತುರುಕಿ ವಿಕೃತಿ ಮೆರೆದಿದ್ದಾರೆ. ಆಕೆ ಕಿರುಚಿಕೊಂಡ ಸದ್ದಿಗೆ ಅಕ್ಕಪಕ್ಕದವರು ಓಡಿ ಬಂದಿದ್ದಾರೆ.
ಜನರು ಬರುತ್ತಿದ್ದಂತೇ ಶಿಕ್ಷಕಿ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಶಿಕ್ಷಕಿಯ ಪ್ರಾಣ ಉಳಿದಿದೆ. ಆದರೆ ರಾಡ್ ನಿಂದ ಹೊಡೆದ ಕಾರಣ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಶಿಕ್ಷಕಿ ಕುಟುಂಬಸ್ಥರು ದೂರು ನೀಡಿದ್ದರು. ಇದೀಗ ಪೊಲೀಸರು ಡಿವೈಎಸ್ ಪಿ ನೇತೃತ್ವದ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಶ್ರಮಿಸುತ್ತಿದ್ದಾರೆ. ಈ ನಡುವೆ ಶಿಕ್ಷಕಿಯ ದೂರದ ಸಂಬಂಧಿ ಭವಿತ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ಕೆಲವು ದಿನಗಳಿಂದ ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ ಎನ್ನಲಾಗಿದೆ.