Publish Date: Mon, 17 Oct 2022 (21:16 IST)
Updated Date: Mon, 17 Oct 2022 (21:20 IST)
ಹಿಜಾಬ್ ನಿಂದ ಶುರುವಾದ ಧರ್ಮ ಸಂಘರ್ಷ, ವ್ಯಾಪಾರ ಕ್ಷೇತ್ರಕ್ಕೂ ಮೆತ್ತುಕೊಂಡಿದೆ. ದೀಪಾವಳಿ ಹಬ್ಬಕ್ಕೆ ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನ ಬಹಿಷ್ಕರಿಸಿ ಎಂದು, ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿ, ಜನ್ರಿಗೆ ಕರೆ ನೀಡಿದೆ.
ಇಂದಿನಿಂದ ಕರಪತ್ರಗಳ ಮೂಲಕ ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ ಎಂದು ಕರಪತ್ರಗಳನ್ನ ಹಂಚಲಿದ್ದಾರೆ.ನಿನ್ನೆ ಸಂಜೆ ಬೆಂಗಳೂರಿನಲ್ಲಿ ಹಲಾಲ್ ವಿರೋಧಿ ಸಮ್ಮೇಳನ ನಡೆಸಿ, ಹಾಲಾಲ್ ಬಾಯ್ಕಾಟ್ ಮಾಡಿ ಹಬ್ಬ ಆಚರಣೆ ಮಾಡೊಣ ಎಂದು ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿವೆ.
ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲೂ ನಮ್ಮ ಅಭಿಯಾನ ನಡೆಯಲಿದ್ದು, ಹಲಾಲ್ ಸರ್ಟಿಫೈಡ್ ಇರುವ ಉತ್ಪನ್ನಗಳನ್ನ ಖರೀದಿಸದಂತೆ, ಕರಪತ್ರಗಳ ಮೂಲಕ ಜನರಿಗೆ ಜಾಗೃತಿ ಮೂಡಿಸ್ತೇವೆ. ನಮ್ಮ ಅಭಿಯಾನ ರಾಜ್ಯಾದ್ಯಾಂತ ನಡೆಯಲಿದೆ ಅಂತ ಹಿಂದೂ ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ಹೇಳಿದರು.
ಹಬ್ಬಕ್ಕೂ ಮುನ್ನವೇ ಮುಸ್ಲಿಂ ಅಂಗಡಿಗಳಲ್ಲಿ ಹಲಾಲ್ ಮಾಂಸ ಖರೀದಿಸಬೇಡಿ. ಉತ್ಪನ್ನಗಳನ್ನೂ ಬಹಿಷ್ಕರಿಸಿ ಅನ್ನೋ ಅಭಿಯಾನ ಶುರುವಾಗಿದ್ದು , ಧರ್ಮದ ಕಿಡಿ ಹೆಚ್ಚಾಗುವಂತೆ ಮಾಡಿದೆ. ಹಿಂದೂಪರ ಸಂಘಟನೆಗಳ ಅಭಿಯಾನಗಳಿಗೆ ಕೆಲ ಮುಸ್ಲಿಂ ಮುಖಂಡರುಗಳು ತೀವ್ರ ವಿರೋಧವನ್ನ ವ್ಯಕ್ತಪಡಿಸಿದ್ದಾರೆ.