Publish Date: Thu, 29 Nov 2018 (09:28 IST)
Updated Date: Thu, 29 Nov 2018 (09:29 IST)
ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ಆಪ್ತರ ಬಳಗದೊಂದಿಗೆ ಭೇಟಿಯಾಗಿ ಚರ್ಚೆ ನಡೆಸಿದ್ದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಡಿಕೆಶಿ ಅವರನ್ನು ಭೇಟಿಯಾಗಿದ್ದೆ ಎಂದು ಬಿಎಸ್ ವೈ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೂ ಈ ಚರ್ಚೆಯ ನಂತರ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಕೆಲ ಹೊತ್ತು ಮಾತುಕತೆ ನಡೆಸಿರುವುದು ಮತ್ತು ಮಾತುಕತೆ ನಂತರ ಡಿಕೆಶಿ ಶೇ.101 ರಷ್ಟು ನನ್ನ ಆತ್ಮೀಯ ಸ್ನೇಹಿತ’ ಎಂದು ಬಿಎಸ್ ವೈ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೆಲವು ಮೂಲಗಳ ಪ್ರಕಾರ ಡಿಕೆಶಿಯನ್ನು ಬಿಜೆಪಿಗೆ ಸೆಳೆಯಲು ಹೈಕಮಾಂಡ್ ಸೂಚನೆಯಂತೆ ಬಿಎಸ್ ವೈ ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಈ ಭೇಟಿ ಸಂದರ್ಭ ಬಿಎಸ್ ವೈ ಜತೆಗೆ ಪುತ್ರ, ಸಂಸದ ಬಿವೈ ರಾಘವೇಂದ್ರ, ಹರತಾಳು ಹಾಲಪ್ಪ, ಪ್ರಭಾಕರ ಕೋರೆ ಮುಂತಾದವರೂ ಇದ್ದರು. ಡಿಕೆ ಶಿವಕುಮಾರ್ ಕೂಡಾ ಬಿಎಸ್ ವೈ ಬರುತ್ತಾರೆಂಬ ಸುದ್ದಿ ತಿಳಿದು ಹೈದರಾಬಾದ್ ಕಾರ್ಯಕ್ರಮ ರದ್ದುಗೊಳಿಸಿ ತಮ್ಮ ಮನೆಯಲ್ಲಿ ಖುದ್ದಾಗಿ ಪುಷ್ಪಗುಚ್ಛ ಹಿಡಿದು ಬಿಜೆಪಿ ನಾಯಕರನ್ನು ಸ್ವಾಗತಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.