ಬೆಂಗಳೂರು: ಬಿಜೆಪಿ, ಆರ್ ಎಸ್ಎಸ್ ನಂತಹ ಸಂಘಟನೆಗಳು ದಲಿತರು, ಹಿಂದುಳಿದವರ ವಿರೋಧಿಗಳು. ಈ ಸಮುದಾಯದವರು ಬಿಜೆಪಿ, ಆರ್ ಎಸ್ಎಸ್ ಗೆ ಯಾಕೆ ಸೇರ್ತಾರೋ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಜಾತಿ ಜಾತಿ ಎನ್ನುವುದನ್ನು ಮೊದಲು ನಿಲ್ಲಿಸಿ ಎಂದಿದ್ದಾರೆ.
ನಿನ್ನೆ ಎಲ್ ಜಿ ಹಾವನೂರು ವರದಿಯ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂದುಳಿದವರು, ದಲಿತರು ಸೇರಿದಂತೆ ಶೂದ್ರ ಸಮುದಾಯದವರು ತಮ್ಮ ವಿರೋಧಿಗಳಾದ ಬಿಜೆಪಿ - ಆರ್.ಎಸ್.ಎಸ್ - ಎಬಿವಿಪಿ ಸೇರುತ್ತಾರಲ್ಲಾ ಇವರಿಗೆ ಏನು ಹೇಳೋದು? ಬಿಜೆಪಿ - ಆರ್.ಎಸ್.ಎಸ್ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರುತ್ತಾರಲ್ಲಾ ಇದಕ್ಕೇನು ಮಾಡೋದು?
ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ - ಆರ್.ಎಸ್.ಎಸ್ ಸೇರಿ ಇವರೇ ಮೂಲ ಆರ್.ಎಸ್.ಎಸ್ ನವರಿಗಿಂತ, ಹೆಡಗೆವಾರ್ ರೀತಿ ಮಾತಾಡ್ತಾರೆ ಎಂದಿದ್ದರು.
ಅವರ ಮಾತಿಗೆ ಸಿಎಂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಅವರಿಗೆ ಕಾಮೆಂಟ್ ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಬ್ಬ ರಾಜ್ಯದ ಸಿಎಂ ಆಗಿ ಹೀಗೆ ಜಾತಿಗಳ ನಡುವೆ ವಿಷ ಬೀಜ ಬಿತ್ತುವುದು ಸರಿಯೇ ಎಂದು ಒಬ್ಬರು ಕೇಳಿದರೆ ಮತ್ತೊಬ್ಬರು ತಾಕತ್ತಿದ್ದರೆ ಜಾತಿ ಪದ್ಧತಿ ತೆಗೆದು ಹಾಕಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ನಿಮ್ಮ ಆಡಳಿತದಲ್ಲಿ ಅಹಿಂದ ವರ್ಗ ಎಷ್ಟು ಮುಂದುವರಿದಿದೆ ತೋರಿಸಿ ಎಂದಿದ್ದಾರೆ. ಹೆಸರಿಗೆ ಜಾತ್ಯಾತೀತ, ಮಾತೆತ್ತಿದರೆ ಜಾತಿ ಜಾತಿ ಎಂದು ಮಾತನಾಡುತ್ತೀರಿ ಎಂದು ವ್ಯಂಗ್ಯ ಮಾಡಿದ್ದಾರೆ.