Publish Date: Sat, 19 Apr 2025 (11:57 IST)
Updated Date: Sat, 19 Apr 2025 (11:59 IST)
ಬೆಂಗಳೂರು: ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಭೇಟಿ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಯಾವುದೇ ವಿವಾದ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇಂದು ಬೆಳಿಗ್ಗೆಯೇ ಡಿಕೆಶಿ ನಿವಾಸಕ್ಕೆ ಸಂಸದ ರಾಘವೇಂದ್ರ ಬಂದಿದ್ದಾರೆ. ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿ ಸಂಸದರು ಭೇಟಿ ನೀಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿತ್ತು. ಹೊರಬಂದ ಬಳಿಕ ಮಾಧ್ಯಮಗಳು ಭೇಟಿಯ ಉದ್ದೇಶದ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ಮಾತನಾಡಿದ ಅವರು ಈ ಭೇಟಿಗೆ ಯಾವುದೇ ರಾಜಕೀಯ ಕಾರಣಗಳಿಲ್ಲ. ನನ್ನ ಮಗನ ಮದುವೆಯಿದೆ. ಅವರು ಈ ರಾಜ್ಯದ ಗೌರವಾನ್ವಿತ ಉಪಮುಖ್ಯಮಂತ್ರಿಗಳು. ಹೀಗಾಗಿ ಮದುವೆಗೆ ಕರೆಯಲು ಬಂದಿದ್ದೆ ಅಷ್ಟೇ. ಇದಕ್ಕೆ ರಾಜಕೀಯ ಉದ್ದೇಶ ಏನೂ ಇಲ್ಲ. ಈ ಬಗ್ಗೆ ವಿವಾದ ಬೇಡ ಎಂದಿದ್ದಾರೆ.
ಐದು ನಿಮಿಷ ಮದುವೆ ವಿಚಾರ ಮಾತನಾಡಿದ್ವಿ. ಬಳಿಕ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮಾತನಾಡಿದ್ದೇವೆ ಅಷ್ಟೇ. ಬೇರೇನೂ ಇಲ್ಲ. ಅವರೂ ಮದುವೆಗೆ ಬರ್ತೀನಿ ಎಂದಿದ್ದಾರೆ. ಇನ್ನೂ ಸಾಕಷ್ಟು ಜನ ನಾಯಕರನ್ನು ಮದುವೆಗೆ ಆಹ್ವಾನಿಸುತ್ತೇನೆ ಎಂದಿದ್ದಾರೆ.