Publish Date: Tue, 16 Sep 2025 (10:42 IST)
Updated Date: Tue, 16 Sep 2025 (10:52 IST)
ಮೈಸೂರು: ಒಂದೆಡೆ ದಸರಾ ಉತ್ಸವಕ್ಕೆ ಮುಸ್ಲಿಂ ಧರ್ಮೀಯರಾದ ಸಾಹಿತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುತ್ತಿರುವುದಕ್ಕೆ ಹಿಂದೂಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಮೈಸೂರಿನಲ್ಲಿ ಸದ್ದಿಲ್ಲದೇ ದರ್ಗಾವೊಂದರ ನಿರ್ಮಾಣಕ್ಕೆ ಸ್ಥಳೀಯಾಡಳಿತ ಒಪ್ಪಿಗೆ ನೀಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಗಾಡಿ ಚೌಕದಲ್ಲಿ ದರ್ಗಾ ನಿರ್ಮಿಸಲು ಮೈಸೂರು ಮಹಾನಗರ ಪಾಲಿಕೆ ನೋಟಿಫಿಕೇಷನ್ ನೀಡಿದೆ. ಸರ್ಕಾರಿ ಜಾಗದಲ್ಲಿ ಈ ರೀತಿ ದರ್ಗಾ ನಿರ್ಮಿಸಲು ಮುಂದಾಗಿರುವುದು ಅಕ್ರಮ. ಈ ನೋಟಿಫಿಕೇಷನ್ ಕೂಡಲೇ ಹಿಂಪಡೆಯಬೇಕು ಎಂದು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗಳಲ್ಲಿ ನೋಟಿಸ್ ನೀಡಲಾಗಿದ್ದು, ಆಕ್ಷೇಪಣೆ ಇದ್ದರೆ 15 ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಕೆಆರ್ ಗಾಡಿ ಚೌಕದಲ್ಲಿ ಉದ್ಯಾನವನ, ತೆರೆದ ಪ್ರದೇಶದಲ್ಲಿ ದರ್ಗಾ ನಿರ್ಮಿಸಲು ಹೊರಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಆ ಜಾಗ ಸುಮಾರು 45 ಸಾವಿರ ಚದರ ಅಡಿಯಷ್ಟಿದೆ. ಗೆಜೆಟ್ ಇಯರ್ 1965 ರ ಉಲ್ಲೇಖ ಇದೆ. ಇದು ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ಆದರೆ ಗೆಜೆಟ್ ನಲ್ಲಿ ತಪ್ಪಿದೆ. ಆ ಜಾಗವೇ ಬೇರೆ, ಈ ಜಾಗವೇ ಬೇರೆ. 2025 ರಲ್ಲಿ ಖಾತೆ ಮಾಡಲು ಮುಂದಾಗಿದ್ದಾರೆ. ಆ ಜಾಗದಲ್ಲಿ ಪಿಲ್ಲರ್ ಹಾಕುತ್ತಿದ್ದಾರೆ. ಎಲ್ಲರೂ ದಸರಾದಲ್ಲಿ ಮುಳುಗಿರುವಾಗ ಸದ್ದಿಲ್ಲದೇ ನಗರ ಪಾಲಿಕೆ ಈ ಜಾಗವನ್ನು ಮುಸ್ಲಿಂ ಟ್ರಸ್ಟ್ ಗೆ ಖಾತೆ ಮಾಡಲು ಮುಂದಾಗಿದೆ. ಕೋಮು ಸೌಹಾರ್ದತೆ ಕಾಪಾಡಬೇಕಾದ ಪಾಲಿಕೆಯೇ ಕೋಮು ಸೌಹಾರ್ದತೆ ಹಾಳು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.