Publish Date: Wed, 24 Sep 2025 (15:05 IST)
Updated Date: Wed, 24 Sep 2025 (15:14 IST)
ಬೆಂಗಳೂರು: ರಸ್ತೆ ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇಂದು ರಸ್ತೆ ಗುಂಡಿ ಮುಚ್ಚಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನೀವೇ ಬೆಂಗಳೂರಿನ ಎಲ್ಲಾ ಗುಂಡಿಗಳನ್ನು ಮುಚ್ಚಿಬಿಡಿ ಎಂದು ಕಾಲೆಳೆದಿದ್ದಾರೆ.
ಆರ್ ಅಶೋಕ್ ಆದಿಯಾಗಿ ಬಿಜೆಪಿಯ ಘಟಾನುಘಟಿ ನಾಯಕರು ಇಂದು ತಲೆಗೆ ಟವೆಲ್ ಸುತ್ತಿಕೊಂಡು ಕೈಯಲ್ಲಿ ಸಿಮೆಂಟ್, ಜಲ್ಲಿ ಕಲ್ಲು ತುಂಬಿದ ಬುಟ್ಟಿ ತೆಗೆದುಕೊಂಡು ಗಲ್ಲಿ ಗಲ್ಲಿಗಳಿಗೆ ಹೋಗಿ ರಸ್ತೆ ಗುಂಡಿ ಮುಚ್ಚುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಫೋಟೋ, ವಿಡಿಯೋಗಳನ್ನು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇನ್ನು ಬಿಜೆಪಿ ನಾಯಕರು ರಸ್ತೆ ಗುಂಡಿ ಮುಚ್ಚುತ್ತಿರುವ ಫೋಟೋ, ವಿಡಿಯೋಗಳನ್ನು ನೋಡಿದ ನೆಟ್ಟಿಗರು ಅವರ ಕಾಲೆಳೆದಿದ್ದಾರೆ.
ಹೇಗೂ ನೀವು ರಸ್ತೆ ಗುಂಡಿ ಮುಚ್ಚಿ ಪ್ರತಿಭಟನೆ ಮಾಡಲು ಹೊರಟಿದ್ದೀರಿ. ಹಾಗೇ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನೂ ಪ್ರತಿಭಟನೆ ನೆಪದಲ್ಲಿ ಮುಚ್ಚಿಬಿಡಿ. ಆಗ ಸರ್ಕಾರದ ಕೆಲಸವೂ ಕಡಿಮೆಯಾಗುತ್ತದೆ, ಜನರಿಗೂ ಉಪಕಾರವಾದಂತೆ ಎಂದು ಕಾಲೆಳೆದಿದ್ದಾರೆ.