ಹಾಸನ: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತಕ್ಕೆ ಬಲಿಯಾದ ಭೂಮಿಕ್ ತಂದೆ ಗೋಳಾಟ ನೋಡಿದರೆ ಎಂತಹವರ ಕರುಳೂ ಚುರುಕ್ ಎನ್ನುತ್ತದೆ. ನನ್ನ ಮಗ ಇಲ್ಲೇ ಮಲಗಿದ್ದಾನೆ, ಅವನನ್ನು ಬಿಟ್ಟು ಬರಲ್ಲ ಎಂದು ತಂದೆ ಗೋಳಾಡುತ್ತಿದ್ದಾರೆ.
ಆರ್ ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಪೈಕಿ ಬೇಲೂರಿನ ಭೂಮಿಕ್ ಕೂಡಾ ಒಬ್ಬ. ಮಗನನ್ನು ತಂದೆ ಲಕ್ಷ್ಮಣ್ ತಮ್ಮ ಮನೆಯ ಸಮೀಪದಲ್ಲೇ ಇರುವ ಜಾಗದಲ್ಲಿ ಮಣ್ಣು ಮಾಡಿದ್ದಾರೆ.
ಇದೀಗ ಮಗನ ಸಮಾಧಿ ಮೇಲೆ ಮಲಗಿ ಲಕ್ಷ್ಮಣ್ ಗೋಳಾಡಿದ್ದಾರೆ. ನನ್ನ ಮಗ ನನಗೆ ಬೇಕು, ಅವನಿಗೆಂದೇ ಮಾಡಿದ ಜಾಗ ಇದು. ಅವನು ಇಲ್ಲಿ ಮಲಗಿದ್ದಾನೆ. ಅವನ ಜೊತೆಗೇ ನಾನೂ ಮಲಗುತ್ತೇನೆ, ಈ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು ಎಂದು ಭೂಮಿಕ್ ಸಮಾಧಿ ಮೇಲೆ ಮಲಗಿ ಗೋಳಾಡಿದ್ದಾರೆ.
ಮಗನ ಸಮಾಧಿಯನ್ನು ತಬ್ಬಿ ಮಲಗಿ ಕಣ್ಣೀರು ಹಾಕುತ್ತಿದ್ದಾರೆ. ನನಗೆ ನನ್ನ ಮಗ ಬೇಕು ಎಂದು ಅವರು ಗೋಳಾಡುತ್ತಿರುವುದು ನೋಡಿದರೆ ಎಂಥಹವರಿಗೂ ಕಣ್ಣೀರು ಬರುತ್ತದೆ. ಅಭಿಮಾನವೆಂದು ಹೋಗಿ ಜೀವ ಕಳೆದುಕೊಂಡವರ ಕುಟುಂಬದವರ ಇಂದಿನ ಪರಿಸ್ಥಿತಿಯಿದು.