ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತಕ್ಕೆ ಸಂಭವಿಸಿದಂತೆ ವಿರಾಟ್ ಕೊಹ್ಲಿ ಮೇಲೆ ದೂರು ದಾಖಲಿಸಿರುವುದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವೇ ಕರೆಸಿ ಜಾತ್ರೆ ಮಾಡಿ ಈಗ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ ಎಂದು ಪ್ರಶ್ನಿಸಿದ್ದಾರೆ.
ಆರ್ ಸಿಬಿ ಆಟಗಾರರನ್ನು ಕರೆಸಿದ್ದಾಗ ಹೆಚ್ಚಿನ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ನೋಡುವ ಉದ್ದೇಶದಿಂದಲೇ ಸಾಗರದಂತೆ ಬಂದಿದ್ದರು. ಸಾಮಾನ್ಯ ಜನ ಮಾತ್ರವಲ್ಲ, ಸಿಎಂ ಮೊಮ್ಮಗ, ಸಚಿವರ ಮಕ್ಕಳು, ಅಧಿಕಾರಿಗಳ ಮಕ್ಕಳು ಸೇರಿದಂತೆ ಪ್ರಭಾವಿಗಳೂ ವೇದಿಕೆಯಲ್ಲೇ ನೆರೆದಿದ್ದರು.
ಇದೀಗ ನೈಜ ಹೋರಾಟಗಾರರ ಸಂಘ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೊಹ್ಲಿ ವಿರುದ್ಧ ದೂರು ನೀಡಿದೆ. ಘಟನೆಗೆ ಕೊಹ್ಲಿ ಕೂಡಾ ಕಾರಣ. ದುರಂತದ ಬಳಿಕ ಕೊಹ್ಲಿ ಸಂತ್ರಸ್ತರ ಕುಟುಂಬವನ್ನೂ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ಆದರೆ ಇದರ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರು ನೀಡುವವರಿಗೆ ಸ್ವಲ್ಪವಾದರೂ ತಲೆಯಿದೆಯೇ? ಒಂದು ವೇಳೆ ಕೊಹ್ಲಿ ಮತ್ತೆ ಸಂತ್ರಸ್ತರ ಭೇಟಿಗೆ ಬಂದಿದ್ದರೆ ಮತ್ತಷ್ಟು ನೂಕುನುಗ್ಗಲು ಆಗುತ್ತಿರಲಿಲ್ಲವೇ? ಅಷ್ಟಕ್ಕೂ ಈ ಘಟನೆಗೆ ಕೊಹ್ಲಿ ಹೇಗೆ ಕಾರಣ? ಕರೆಸಿಕೊಂಡವರು, ಜಾತ್ರೆ ಮಾಡಿದವರು ಯಾರೋ... ಕೊಹ್ಲಿ ಹೇಗೆ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.