Publish Date: Sat, 07 Jun 2025 (09:12 IST)
Updated Date: Sat, 07 Jun 2025 (09:16 IST)
ಬೆಂಗಳೂರು: ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಕಮಿಷನರ್ ಬಿ ದಯಾನಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ಐಪಿಎಸ್ ಅಧಿಕಾರಿಯನ್ನು ಅಮಾನತು ಮಾಡಲು ಸಿಎಂ ಆದೇಶ ಮಾಡಿದರೆ ಸಾಲದು. ಇಲ್ಲಿದೆ ನಿಯಮಾವಳಿ ವಿವರ.
ರಾಜ್ಯ ಸರ್ಕಾರದ ಅಧೀನದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಐಪಿಎಸ್, ಐಎಎಸ್ ಮತ್ತು ಐಎಫ್ಎಸ್ ಅಧಿಕಾರಿಗಳು ಕೇಂದ್ರದ ನಿಯಂತ್ರಣದಲ್ಲಿರುತ್ತಾರೆ. ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಕಾದರೂ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು. ಐಪಿಎಸ್, ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿದ್ದರೆ, ಅಮಾನತು ಮಾಡುವುದಿದ್ದರೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು.
ಕೇಂದ್ರ ಸರ್ಕಾರ ಸೂಕ್ತ ಕಾರಣವಿದೆ ಎಂದು ಒಪ್ಪಿಕೊಂಡು ಸಮ್ಮತಿಸಿದರೆ ಮಾತ್ರ ಆದೇಶ ಮಾನ್ಯವಾಗುತ್ತದೆ. ರಾಜ್ಯ ನೀಡಿರುವ ವರದಿ ಬಗ್ಗೆ ಕೇಂದ್ರ ಸರ್ಕಾರ ಒಂದು ತಿಂಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಇದು ನಿಯಮ. ಈಗ ಅಮಾನತಾಗಿರುವ ಬಿ ದಯಾನಂದ ಅವರಿಗೂ ಇದೇ ನಿಯಮ ಅನ್ವಯವಾಗುತ್ತದೆ.
ಈಗಾಗಲೇ ಬಿ ದಯಾನಂದ ಅಮಾನತಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅಪಸ್ವರವೆತ್ತಿದ್ದಾರೆ. ರಾಜ್ಯ ಸರ್ಕಾರ ಬಿ ದಯಾನಂದ ಅವರನ್ನು ಅಮಾನತು ಮಾಡಿರುವ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸುತ್ತದೆ. ಆಗ ಕೇಂದ್ರವೇನಾದರೂ ಇದನ್ನು ಮಾನ್ಯ ಮಾಡದೇ ಇದ್ದರೆ ಅವರು ಮತ್ತೆ ನಿರಾಳವಾಗಿ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ಆಗ ರಾಜ್ಯ ಸರ್ಕಾರದ ಆದೇಶಕ್ಕೆ ಬೆಲೆಯಿರುವುದಿಲ್ಲ.