ಬೆಂಗಳೂರು: ತಂದೆಯ ಹುಟ್ಟುಹಬ್ಬದಂದು ಮಟನ್ ತರಲೆಂದು ಬೈಕ್ ನಲ್ಲಿ ಹೋಗುತ್ತಿದ್ದಾಗ ಮರದ ಕೊಂಬೆ ಮುರಿದು ಬಿದ್ದು ಗಂಭಿರ ಗಾಯಗೊಂಡಿದ್ದ ಬೆಂಗಳೂರಿನ ಅಕ್ಷಯ್ ಕೊನೆಗೂ ಬದುಕುಳಿಯಲಿಲ್ಲ.
ಐದು ದಿನಗಳಿಂದ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಅಕ್ಷಯ್ ಇಂದು ಕೊನೆಯುಸಿರೆಳೆದಿದ್ದಾರೆ. ಈತನ ಚೇತರಿಕೆಗಾಗಿ ಅಜ್ಜ-ಅಜ್ಜಿ ಹೋಮ-ಹವನ ಮಾಡಿ ದೇವರ ಪ್ರಾರ್ಥನೆ ಮಾಡಿದರು. ಸಾರ್ವಜನಿಕರೂ ಆತ ಗುಣವಾಗಿ ಬರಲೆಂದು ಹಾರೈಸಿದ್ದರು.
ಆದರೆ ಯಾರ ಪ್ರಾರ್ಥನೆಯೂ ಫಲಕೊಡಲಿಲ್ಲ. ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ಅಕ್ಷಯ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೊನ್ನೆ ಅವರ ಮೆದುಳಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ ಯಾವುದೂ ಫಲಕೊಟ್ಟಿರಲಿಲ್ಲ.
ಕತ್ರಿಗುಪ್ಪೆಯ ನಿವಾಸಿಯಾಗಿದ್ದ ಅಕ್ಷಯ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತನೇ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ ಈಗ ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಆತನ ಚಿಕಿತ್ಸಾ ವೆಚ್ಚವಲ್ಲದೆ ಐದು ಲಕ್ಷ ರೂ. ಪರಿಹಾರ ಹಣವನ್ನು ಬಿಬಿಎಂಪಿ ನೀಡಿದೆ.