ಬೆಂಗಳೂರು: ರಾಜ್ಯ ರಾಜಧಾನಿ ನಾಗರಿಕರಿಗೆ ವಾರಕ್ಕೊಂದು ಬೆಲೆ ಏರಿಕೆ ಬಿಸಿ ಎಂಬಂತಾಗಿದೆ. ಈ ವಾರ ಕಾವೇರಿ ನೀರಿನ ಸರದಿ ಎಂದು ವರದಿಯಾಗಿದೆ.
ಕಳೆದ ವಾರ ಬೆಂಗಳೂರು ಮೆಟ್ರೊ ಪ್ರಯಾಣ ದರ ದುಪ್ಪಟ್ಟಾಗಿತ್ತು. ಇದರ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮೆಟ್ರೊ ಪ್ರಯಾಣ ದುಬಾರಿಯಾಗಿರುವುದರಿಂದ ಜನ ಈಗ ಬಸ್ ಅಥವಾ ಖಾಸಗಿ ವಾಹನಗಳನ್ನು ಆಶ್ರಯಿಸುತ್ತಿದ್ದಾರೆ.
ಇದಕ್ಕೆ ಮೊದಲು ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಹೆಚ್ಚು ಮಾಡಿತ್ತು. ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲಾ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡಿತ್ತು. ಇದೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಅದರ ಬೆನ್ನಲ್ಲೇ ಈಗ ಕಾವೇರಿ ನೀರಿನ ದರ ಹೆಚ್ಚಳದ ಬಗ್ಗೆ ಸುದ್ದಿಯಾಗಿದೆ. ಕಳೆದ ಕೆಲವು ಸಮಯದಿಂದಲೂ ನೀರಿನ ದರ ಏರಿಕೆ ಬಗ್ಗೆ ಪ್ರಸ್ತಾಪವಿತ್ತು. ಇದೀಗ ಈ ವಾರದಿಂದಲೇ ಕಾವೇರಿ ನೀರಿನ ದರ ಏರಿಕೆ ಬಗ್ಗೆ ಘೋಷಣೆಯಾಗಲಿದೆ ಎಂದು ಸುದ್ದಿಯಾಗಿದೆ. ಮುಂದಿನ ಗುರುವಾರ ಕ್ಯಾಬಿನೆಟ್ ಸಭೆ ನಡೆಯಲಿದ್ದು ಸಭೆಯಲ್ಲಿ ಕಾವೇರಿ ನೀರಿನ ದರ ಏರಿಕೆ ಬಗ್ಗೆ ಚರ್ಚೆಯಾಗಲಿದೆ. ಒಂದು ವೇಳೆ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಶೀಘ್ರದಲ್ಲೇ ಬೆಂಗಳೂರಿಗರಿಗೆ ಕಾವೇರಿ ನೀರಿದ ದರ ಏರಿಕೆ ಬರೆ ಸಿಗಲಿದೆ.