Publish Date: Wed, 10 Jan 2024 (16:34 IST)
Updated Date: Wed, 10 Jan 2024 (17:39 IST)
ಕೇರಳ : ಶಬರಿಮಲೆಯಲ್ಲಿ ಸಧ್ಯಕ್ಕೆ ಭೇಟಿ ನೀಡಿರುವ ಭಕ್ತಾದಿಗಳು ಹಿಂದಿರುಗುವವರೆಗೂ ಪ್ರವೇಶಾವಕಾಶಕ್ಕೆ ನಿರ್ಬಂಧ ಮುಂದುವರೆಯಲಿದೆ. ಶಬರಿಮಲೆಯಲ್ಲಿ ಸ್ವಾಮಿ ಅಯ್ಯಪ್ಪನ ದೇಗುಲಕ್ಕೆ ಭಕ್ತಾದಿಗಳು ಪ್ರವಾಹೋಪಾದಿಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಧ್ಯಕ್ಕೆ ಪ್ರವೇಶಾವಕಾಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದೇ ವೇಳೆ, ಜನರ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಕೇರಳ ಸರ್ಕಾರ ನಿರಾಕರಿಸಿದೆ. ಕೇರಳ ಹೈಕೋರ್ಟ್ ಗೆ ಸರ್ಕಾರ ಸಲ್ಲಿಸಿರುವ ಲಿಖಿತ ವರದಿಯಲ್ಲಿ ನಮ್ಮ ಸಿಸಿಟಿವಿ ಕೆಮೆರಾಗಳೂ ಸಹ ಭಕ್ತರ ಮೇಲೆ ನಡೆಸಿರುವ ಲಾಠಿ ಪ್ರಹಾರದ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲವಾಗಿದೆ ಎಂದು ಹೇಳಿದೆ.
ಈ ಹಿಂದೆ ಶಬರಿಮಲೆಗೆ ತೆರಳಿದ್ದ ಭಕ್ತಾದಿಗಳು ಸತತ 48 ತಾಸುಗಳ ಕಾಲ ಸರದಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದು ಭಾರೀ ಸುದ್ದಿಯಾಗಿತ್ತು. ಸಾವಿರಾರು ಮಂದಿ ಆಹಾರ, ವಿಶ್ರಾಂತಿಯಿದಲ್ಲದೇ ಬಸವಳಿದು ಕೇರಳ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದರು. ಈ ಕುರಿತು ದೂರು ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ಭಕ್ತಾದಿಗಳಿಗೆ ಕುಡಿಯುವ ನೀರು, ಲಘು ಉಪಹಾರ ಮತ್ತು ಸರದಿಯಲ್ಲಿ ವಿಶ್ರಾಂತಿ ಕೇಂದ್ರಗಳ ವ್ಯವಸ್ಥೆ ಕಲ್ಪಿಸುವಂತೆ ದೇವಸ್ವಂ ಬೋರ್ಡ್ ಮತ್ತು ಕೇರಳ ಸರ್ಕಾರಕ್ಕೆ ತಾಕೀತು ಮಾಡಿತ್ತು.