Publish Date: Wed, 28 Nov 2018 (16:54 IST)
Updated Date: Wed, 28 Nov 2018 (16:56 IST)
ರಂಭಾಪುರಿ ಶ್ರೀಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಅಯ್ಯನಗೌಡ ಪಾಟೀಲ ಎಂಬಾತನನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ. ಕಲಬುರ್ಗಿಯ ಸ್ಟೇಷನ್ ಬಜಾರ್ ಠಾಣೆ ಪೊಲೀಸರು, ಅಯ್ಯನಗೌಡ ಪಾಟೀಲ್ ನನ್ನು ಬಂಧಿಸಿದ್ದಾರೆ.
ಅಯ್ಯನಗೌಡ ಪಾಟೀಲ ಜೇವರ್ಗಿ ಕಾಲೋನಿ ನಿವಾಸಿಯಾಗಿದ್ದು, ಸದ್ಯ ಕಲಬುರ್ಗಿಯ ಸಿ.ಐ.ಬಿ. ಕಾಲೋನಿಯಲ್ಲಿ ವಾಸಿಸುತ್ತಿದ್ದ. ರಂಭಾಪುರಿ ಶ್ರೀಗಳ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ರಂಭಾಪುರಿ ಶ್ರೀಗಳನ್ನು ವೇಶ್ಯೆಗೆ ಹೋಲಿಸಿದ್ದ ಅಯ್ಯನಗೌಡ, ಗಯ್ಯಾಳಿ ಇತ್ಯಾದಿಯಾಗಿ ಅವಹೇಳನ ಮಾಡಿದ್ದ. ಅಯ್ಯನಗೌಡ ಹಾಕಿದ ಪೋಸ್ಟ್ ವಿರುದ್ಧ ರಂಭಾಪುರಿ ಶ್ರೀಗಳ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ವೀರಶೈವ ಲಿಂಗಾಯತ ಜಂಗಮ ಬಳಗದ ಸದಸ್ಯರು, ಅಯ್ಯನಗೌಡ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿತ್ತು.
ನವೆಂಬರ್ 22ರಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನ ಮಾಡುವ ಮೂಲಕ ಅಯ್ಯನಗೌಡ ಪಾಟೀಲ, ರಂಭಾಪುರಿ ಶ್ರೀಗಳ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಜೊತೆಗೆ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ ಪೋಸ್ಟ್ ಗೆ ಲೈಕ್ ಮಾಡಿದ ಮತ್ತು ಶೇರ್ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಕಲಬುರ್ಗಿ ಎಸ್.ಪಿ. ಎನ್.ಶಶಿಕುಮಾರ್ ತಿಳಿಸಿದ್ದಾರೆ.